ADVERTISEMENT

ಏಕಪಕ್ಷೀಯ ನಿರ್ಧಾರ: ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:45 IST
Last Updated 22 ಅಕ್ಟೋಬರ್ 2012, 7:45 IST

ಯಳಂದೂರು: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಕೆಲವೊಂದು ವಿಷಯಗಳನ್ನು ಸದಸ್ಯರ ಗಮನಕ್ಕೆ ತಾರದೇ ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯರಾದ ಶ್ರೀನಿವಾಸನಾಯಕ, ಸೋಮನಾಯಕ ಹಾಗೂ ನಾಮ ನಿರ್ದೇಶಿತ ಸದಸ್ಯ ನಾಗೇಶ್ ಆರೋಪಿಸಿದ್ದಾರೆ.
ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಶೇ.22.75ರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಖರೀದಿಸಲು `ಏಸರ್~ ಕಂಪೆನಿಯನ್ನು ನಿಗದಿಯಾಗಿತ್ತು. ಆದರೆ ಏಕಾಏಕಿಯಾಗಿ `ಎಚ್‌ಸಿಎಲ್~ ಕಂಪೆನಿಯ ಲ್ಯಾಪ್‌ಟ್ಯಾಪ್ ಖರೀದಿಸಿ ವಿತರಿಸಲಾಗಿದೆ. ಈ ಬಗ್ಗೆ ಸಭೆ ಕರೆದು ಸದಸ್ಯರಿಗೆ ಮಾಹಿತಿ ನೀಡಿಲ್ಲ. ಈ ಹಿಂದೆ ಪಟ್ಟಣದಲ್ಲಿ 140 ಹೆಚ್ಚು ಫಲಾನುಭವಿಗಳಿಗೆ ಸೋಲಾರ್ ದೀಪ ಕೊಡಿಸುವ ಬಗ್ಗೆ ಹಲವಾರು ಸಭೆಗಳಲ್ಲಿ ಚರ್ಚೆಗೆ ತಂದಿದ್ದರೂ ಈ ಬಗ್ಗೆ ಗಮನ ಹರಿಸಿಲ್ಲ.

ವರಹಸ್ವಾಮಿ ದೇಗುಲದ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಗ್ಗೆ ಮಾಹಿತಿ ನೀಡುವಂತೆ ತಹಶೀಲ್ದಾರ್ ಕಚೇರಿಯಿಂದ ಪತ್ರ ಬಂದಿದ್ದರೂ ಇನ್ನೂ ಮಾಹಿತಿ ನೀಡಿಲ್ಲ. ಕುಂಬಾರಗುಂಡಿಯಲ್ಲಿ ಉಳ್ಳವರಿಗೆ ಕಟ್ಟಡ ಪರವಾನಿಗೆ ನೀಡಲಾಗಿದೆ. ಆದರೆ, ಕೆಲವು ಬಡವರು  ಮನೆಗಳ ನಿರ್ಮಾಣಕ್ಕೆ ಪರವಾನಿಗೆ ಕೋರಿದ್ದರೂ ಇನ್ನೂ ನೀಡಿಲ್ಲ.

ಒಟ್ಟಾಗಿ ಇಲ್ಲಿನ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಈ ಎಲ್ಲಾ ವಿಚಾರಗಳನ್ನು ಬಿಟ್ಟು ಉಳಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಶುಕ್ರವಾರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ. ಸಭೆಗೆ ಮಾಧ್ಯಮದವರಿಗೂ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರೂ ಇದನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ ಈ ಸಭೆಯನ್ನು ಬಹಿಷ್ಕರಿಸಿದ್ದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.