ADVERTISEMENT

ಕಂದಹಳ್ಳಿ: ಅಭಿವೃದ್ಧಿ ಬಲು ದೂರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 10:01 IST
Last Updated 3 ಏಪ್ರಿಲ್ 2013, 10:01 IST

ಯಳಂದೂರು: ತಾಲ್ಲೂಕಿನಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲಿರುವ ಕಂದಹಳ್ಳಿ ಗ್ರಾಮ ಅವ್ಯವಸ್ಥೆ ಅಗರವಾಗಿದೆ.
ಹಲವು ವರ್ಷಗಳಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕಂದಹಳ್ಳಿ ಗ್ರಾಮವನ್ನು ಅಭಿವೃದ್ಧಿಯಿಂದ ದೂರ ಉಳಿಯುವಂತೆ ಮಾಡಿದೆ.

ಉಪ್ಪಾರ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ತ್ಯಾಜ್ಯ ನೀರು ಮನೆಗಳ ಮುಂದೆಯೇ ಹರಿಯುತ್ತದೆ. ಅಲ್ಲದೆ, ಇದು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿಯೇ ಇಲ್ಲಿನ ನಿವಾಸಿಗಳು ಬದುಕು ಸವೆಸುತ್ತಿದ್ದಾರೆ.

ಮಳೆಗಾಲದಲ್ಲಿ ಉಪ್ಪಾರ ಬಡಾವಣೆ ಕೆರೆಯಂತಾಗುತ್ತದೆ. ಇದರಿಂದಾಗಿ ಮಣ್ಣಿನ ಮನೆಗಳು ಅಪಾಯ ಎದುರಿಸುವಂತಾಗಿದೆ. ಮನೆಗಳಿಗೆ ಹೋಗಬೇಕಾದರೆ ನಡುಮಟ್ಟದ ನೀರನಲ್ಲಿ ನಡೆದು ಹೋಗಬೇಕು ಎಂದು ಗ್ರಾಮಸ್ಥ ಮಹದೇವಶೆಟ್ಟಿ ಹೇಳುತ್ತಾರೆ.

`ಹಲವು ವರ್ಷಗಳ ಹಿಂದೆ ದೊಡ್ಡದಾದ ಚರಂಡಿ ನಿರ್ಮಾಣವಾಗಿದೆ. ಇದು ಸಂಪರ್ಕ ಕಲ್ಪಿಸುವ ಕಾಲುವೆಯ ಭಾಗದಲ್ಲಿ ಮುಚ್ಚಲ್ಪಟ್ಟಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದ್ದೇವೆ. ಪ್ರತಿಭಟನೆ ಕೂಡ ನಡೆಸಿದ್ದೇವೆ. ಆದರೆ ಇಲ್ಲಿವರೆಗೆ ಯಾವುದೇ ಪ್ರಯೋಜನವಾಗಿಲ್ಲ' ಎಂಬುದು ಗ್ರಾಮದ ಬಸವಶೆಟ್ಟಿ ಅವರ ಆರೋಪ.

`ಈಗಾಗಲೇ ತಾಲ್ಲೂಕು ಪಂಚಾಯಿತಿ ಅನುದಾನದಡಿ ನಾಯಕರ ಬೀದಿಯಲ್ಲಿ ಚರಂಡಿ ನಿರ್ಮಾಣಕ್ಕೆ ರೂ. 1.33 ಲಕ್ಷ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಉಪ್ಪಾರ ಬಡಾವಣೆಯಲ್ಲೂ ರೂ. 1 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಮಗಾರಿಕೈಗೆತ್ತಿಕೊಂಡು, ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು' ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ನಾಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.