ADVERTISEMENT

ಕೆರೆಗಳಿಗೆ ನೀರು ಪೂರೈಕೆ– ಸಚಿವ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:35 IST
Last Updated 8 ಜನವರಿ 2014, 6:35 IST

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿರುವ ಪ್ರಮುಖ ಕೆರೆಗಳನ್ನು ಗುರುತಿಸಿ  ₨ 67 ಕೋಟಿ ವೆಚ್ಚದಲ್ಲಿ ನೀರು ತುಂಬಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು.

ತಾಲ್ಲೂಕಿನ ಬೇಗೂರು ಹೋಬಳಿಯ ಬೆಳಚಲವಾಡಿ ಗ್ರಾಮದಲ್ಲಿ ₨ 15 ಕೋಟಿ ವೆಚ್ಚದಲ್ಲಿ 31 ಕಿ.ಮೀ. ವ್ಯಾಪ್ತಿಯ ರಾಮನಾಥಪುರ–- ತೆರಕಣಾಂಬಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ತಾಂತ್ರಿಕ ಸಲಹಾ ಮಂಡಳಿಯಿಂದ ಅನುಮೋದನೆ­ಗೊಂಡಿದ್ದು, ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದರು. ಹಾಲಹಳ್ಳಿ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗು­ವುದು ಎಂದರು.

ಹಾಲಹಳ್ಳಿ ಗ್ರಾಮದಲ್ಲಿ 6 ತಿಂಗಳಿನಲ್ಲಿಯೇ ನಿರ್ಮಿಸಲು ಉದ್ದೇಶಿಸಿರುವ ₨ 22 ಲಕ್ಷ ವೆಚ್ಚದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವಸತಿಗೃಹದ ನಿರ್ಮಾಣಕ್ಕೆ ಚಾಲನೆ ನೀಡಿದರು. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಮತ್ತು ಅಕ್ಷರ ದಾಸೋಹ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಗ್ರಾಮಗಳ ಆರೋಗ್ಯ ಸಹಾಯಕಿಯರ ವಸತಿಗೃಹಗಳಲ್ಲಿ ಸಾರ್ವಜನಿಕರು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ವಾರದಲ್ಲಿ ಒಂದು ದಿನ ವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಕೇಂದ್ರದಲ್ಲಿ 40 ಎಕರೆ ಜಾಗದಲ್ಲಿ 350 ಹಾಸಿಗೆಗಳ 118 ಕೋಟಿ ವೆಚ್ಚದಲ್ಲಿ ಮೆಡಿಕಲ್ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ ಗಳ ಸಾಲ ನೀಡಲಾಗುವುದು ಅಂತೇಯೇ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬೀದಿಗಳಿಗೆ ಸಿಮೆಂಟ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಬಿ.ಎಂ. ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸದಸ್ಯ ಬಂಗಾರನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಮ್ಮ, ಲಕ್ಷ್ಮಮ್ಮ, ನಾಗರಾಜು, ಮುಖಂಡರಾದ  ನಂಜುಂಡಪ್ರಸಾದ್, ಮನೋಜ್‌ ಕುಮಾರ್  ಉಪಸ್ಥಿತರಿದ್ದರು.

ಮಹದೇಶ್ವರಬೆಟ್ಟ: ಹುಂಡಿ ಎಣಿಕೆ
ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದ ಗೋಲಕಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಜ. 9ರಂದು ಎಣಿಕೆ ಮಾಡಲಾಗುತ್ತದೆ.

ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಹುಂಡಿಗಳನ್ನು ತೆರೆದು ಸಂಗ್ರಹವಾಗಿರುವ ಹಣವನ್ನು  ಎಣಿಕೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.