ADVERTISEMENT

ಕ್ರೀಡಾಂಗಣ ಕಾಮಗಾರಿ ಪರಿಶೀಲನೆ; ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 3 ಮೇ 2011, 5:30 IST
Last Updated 3 ಮೇ 2011, 5:30 IST

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಕಾಮಗಾರಿಯನ್ನು ಪರಿಶೀಲಿಸಿದ ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು ಅತೃಪ್ತಿ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಕ್ರೀಡಾಂಗಣ ಸಮಿತಿ ಸಭೆಯ ನಂತರ ಮಹದೇಶ್ವರ ಕಾಲೇಜು ಆವರಣದಲ್ಲಿ ನಿರ್ಮಾಣ ವಾಗುತ್ತಿರುವ ನೂತನ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದರು.

ಕ್ರೀಡಾಂಗಣ ಹಳ್ಳ ಕೊಳ್ಳಗಳಿಂದ ಕೂಡಿದ್ದು, ಸಮತಟ್ಟಾ ಗಿಲ್ಲ. ಕ್ರೀಡಾಂಗಣದ ಸುತ್ತಲೂ ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕ್ರೀಡಾಂಗಣ ಕಾಮಗಾರಿ ಹಣ ಬಳಕೆ ಬಗ್ಗೆ ಸಂಶಯ ಇದ್ದು, ಇದನ್ನು ‘ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್’ ಮಾಡಿಸಲು ಯುವಜನ ಕ್ರೀಡಾ ಇಲಾಖೆ ನಿರ್ದೇಶಕರಿಗೆ ಸೂಚಿಸಿದರು.

ಮೇ 5ರಂದು ಕ್ರೀಡಾಂಗಣ ಉದ್ಘಾಟನೆಯಾಗುತ್ತಿದ್ದು, ಕಾಮಗಾರಿಯನ್ನು ಸಮರ್ಪಕವಾಗಿ ಪೂರೈಸದ ಹೊರತು ಉದ್ಘಾಟನೆ ಬೇಡ, ಉದ್ಘಾಟನೆಯನ್ನು ಮುಂದೂಡುವಂತೆ ಸಂಸದರ ಗಮನಕ್ಕೆ ತರುವುದಾಗಿ ಅವರು ಹೇಳಿದರು.

ಕ್ರೀಡಾಂಗಣದಿಂದ ನೀರು ಹೊರಹೋಗಲು ಸಮರ್ಪಕ ವ್ಯವಸ್ಥೆ ಇಲ್ಲವಾಗಿದೆ. ಟ್ರಾಕ್ ನಿರ್ಮಿಸದಿರುವುದು, ಅಲ್ಲದೇ ಕ್ರೀಡಾಂಗಣ ಸಮತಟ್ಟಾಗಿಲ್ಲದೆ ಇರುವುದನ್ನು ಸರಿಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ತಹಶೀಲ್ದಾರ್ ಡಾ.ವಿ.ವೆಂಕಟೇಶ್‌ಮೂರ್ತಿ, ಕ್ರೀಡಾ ಮತ್ತು ಯುವಜನ ಇಲಾಖೆ ಸಹಾಯ ನಿರ್ದೇಶಕ ರಮೇಶ್, ಕೊಳ್ಳೇಗಾಲ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ಪಿಲಿಪ್, ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಮೋಸೆಸ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.