ಗುಂಡ್ಲುಪೇಟೆ: ಕರ್ನಾಟಕ ಪ್ರದೇಶಾ ಭಿವೃದ್ಧಿ 20ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಎಸ್. ಮಹದೇವ ಪ್ರಸಾದ್ ಶುಕ್ರವಾರ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದವರು ಈ ಸಭೆಗೆ ಗೈರು ಹಾಜರಾಗಿದ್ದಾರೆ ಇದು ಶಿಸ್ತಿನ ಉಲ್ಲಂಘನೆಯಾಗಿದ್ದು ಕರ್ತವ್ಯ ಲೋಪವೆಸಗಿದ್ದಾರೆ ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಹುಲಿ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಸೆಸ್ಕಾಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ದರು. ಹುಲಿ ಯೋಜನೆಯಲ್ಲಿ 54 ಕಿ.ಮೀ. ಪೈಕಿ 45 ಕಿ.ಮೀ. ಸೋಲಾರ್ ವಿದ್ಯುತ್ ಬೇಲಿ ಅಳವಡಿಸಿದ್ದು 9 ಕಿ.ಮೀ. ಆನೆ ಕಂದಕ ತೆಗೆಯಲಾಗಿದೆ ಇದರಿಂದ ಕಾಡಂಚಿನ ಗ್ರಾಮಗಳಲ್ಲಿರುವ ಕಾಡು ಮೃಗಗಳ ಉಪಟಳ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಸ್ತೆ ಬದಿ ಮರಗಳನ್ನು ಕಡಿಯಲು ಆದೇಶ ನೀಡಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸ ಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಒಟ್ಟು 18 ಪ್ರಾಥಮಿಕ ಕೇಂದ್ರಗಳಿದ್ದು 80 ಉಪ ಕೇಂದ್ರಗಳಿವೆ, ಇದರಲ್ಲಿ ಪ್ರತಿ ನಿತ್ಯ 500-600 ಜನ ಹೊರ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ, 50-60 ಜನ ಒಳರೋಗಿಗಳಾಗಿ ಸೇರುತ್ತಿದ್ದಾರೆ ಇಂತಹ ಕೇಂದ್ರಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ ಮತ್ತು ಸಿಬ್ಬಂದಿ ವರ್ಗದವರ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪಾಂಡುವಿಜಯನ್ ರವರಿಗೆ ಸೂಚಿಸಿದರು.
ತಾಲ್ಲೂಕಿನ ಚಿಕ್ಕಾಟಿ ಮತ್ತು ಹಿರೀಕಾಟಿ ಗ್ರಾಮಗಳ ಬಳಿ 2,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಒಟ್ಟು 10 ಸಾವಿರ ಕೃಷಿ ಪಂಪ್ ಸೆಟ್ಗಳಿವೆ, ಮತ್ತು 4,000 ಅನಧಿಕೃತ ಪಂಪ್ಸೆಟ್ಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲಾಗುವುದು ಎಂದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುತ್ತುಗೋಡೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಪುರಸಭೆ ವತಿಯಿಂದ ಕಲ್ಪಿಸಬೇಕೆಂದು ಪ್ರಾಚಾರ್ಯ ರಾಮದಾಸ್ ಮನವಿ ಮಾಡಿದರು.
ತಾಲ್ಲೂಕಿನ ವೀರನಪುರ ಗ್ರಾಮದ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಲು 56 ಅರ್ಜಿಗಳು ಬಂದಿದ್ದು ಇವುಗಳಲ್ಲಿ 22 ಅರ್ಜಿಗಳು ಈಗಾಗಲೇ ಅಂತಿಮ ಹಂತ ತಲುಪಿದ್ದು ಉಳಿದ 34 ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಸ್ಥಳೀಯ ಉದ್ಯಮಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಂಕುಮಾರ್, ತೆರಕಣಾಂಬಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಟಿ.ಪಿ. ಮಹಾದೇವಪ್ಪ, ಬೇಗೂರು ಕ್ಷೇತ್ರದ ಜಿಲ್ಲಾ ಪಂಚಾಯಿ ಸದಸ್ಯ ಡಿ.ಸಿ. ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಹೋಟೆಲ್ ಕಾರ್ಮಿಕರ ಸಂಘ ಉದ್ಘಾಟನೆ ಇಂದು
ಕೊಳ್ಳೇಗಾಲ: ತಾಲ್ಲೂಕು ಹೋಟೆಲ್ ಮತ್ತು ಬಾರ್ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭ ಜೂ.11 ರಂದು ಸಂಜೆ 5 ಗಂಟೆಗೆ ಪಟ್ಟಣದ ಅಚ್ಗಾಳ್ ಯಾತ್ರೀನಿವಾಸ್ ಸಭಾಂಗಣ ದಲ್ಲಿ ನಡೆಯಲಿದೆ. ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮಿ ಕಾರ್ಮಿಕ ಸಂಘ ಉದ್ಘಾಟಿಸುವರು. ಶಾಸಕ ಜಿ.ಎನ್. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು. ನಗರಸಭೆ ಅಧ್ಯಕ್ಷೆ ಮಂಗಳಗೌರಿ ಬಿಎಸ್ಪಿ ರಾಜ್ಯ ಉಪಾ ಧ್ಯಕ್ಷ ಎನ್. ಮಹೇಶ್ ಮತ್ತಿತರರು ಭಾಗವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.