ಚಾಮರಾಜನಗರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಯಾನಗಳ್ಳಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ದೊಡ್ಡಮ್ಮ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕಾಗಿ ದೊಡ್ಡಮ್ಮ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಪಂಚಾಯಿತಿಯಲ್ಲಿ ಬಹುಮತ ಹೊಂದಿದ್ದರೂ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸದಸ್ಯರು ಯಾರೂ ಇಲ್ಲದೇ ಇರುವುದರಿಂದ ಬಿಜೆಪಿಯು ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದೆ.
ಕಾಂಗ್ರೆಸ್ನವರೇ ಆಗಿದ್ದ ಎಚ್.ವಿ. ಚಂದ್ರು ಅವರು ಈ ಮೊದಲು ಅಧ್ಯಕ್ಷರಾಗಿದ್ದರು. ಪಕ್ಷದ ಆಂತರಿಕ ಒಪ್ಪಂದದಂತೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ತೆರವಾಗಿತ್ತು. ಹೊಸ ಅಧ್ಯಕ್ಷರಾಗಲು ದೊಡ್ಡಮ್ಮ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರ ಆಯ್ಕೆಗಾಗಿ ಮೇ 31ರಂದು ಜಿಲ್ಲಾ ಪಂಚಾಯಿತಿ ಸಭೆ ಕರೆಯಲಾಗಿತ್ತು. ಆದರೆ, ಬಿಜೆಪಿಯ ಎಲ್ಲ ಸದಸ್ಯರೂ ಗೈರು ಹಾಜರಾಗಿದ್ದರಿಂದ ಕೋರಂ ಅಭಾವ ಸೃಷ್ಟಿಯಾಗಿಯಾಗಿ ಸಭೆ ರದ್ದುಗೊಂಡಿತ್ತು. ಆ ನಂತರ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.
ಶುಕ್ರವಾರ ನಡೆದ ಸಭೆಯಲ್ಲಿ ದೊಡ್ಡಮ್ಮ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಆಗಿದ್ದ ಉಪವಿಭಾಗಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಘೋಷಿಸಿದರು.
28 ಮಂದಿ ಹಾಜರ್: ಶುಕ್ರವಾರ ನಡೆದ ಸಭೆಗೆ ಕಾಂಗ್ರೆಸ್ನ ಎಲ್ಲ 11, ಬಿಜೆಪಿಯ 16 ಮತ್ತು ವಾಟಾಳ್ ಕನ್ನಡ ಚಳವಳಿ ಪಕ್ಷದ ಒಬ್ಬ ಸದಸ್ಯ ಹಾಜರಾಗಿದ್ದರು. ಬಿಜೆಪಿಯ ಪಿ.ಎನ್. ದಯಾನಿಧಿ ಅವರು ಅನಾರೋಗ್ಯದ ಕಾರಣದಿಂದ ಹಾಜರಾಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.