ಚಾಮರಾಜನಗರ: ಮುಂಜಾಗ್ರತಾ ಕ್ರಮಕೈಗೊಂಡಿದ್ದ ಪರಿಣಾಮ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ಪ್ರತಿಭಟನೆ ನಡೆಸಲಿಲ್ಲ. ಎಂದಿನಂತೆ ಜಿಲ್ಲಾ ಪೊಲೀಸ್ ಇಲಾಖೆ, ಡಿವೈಎಸ್ಪಿ ಕಚೇರಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಸೇರಿದಂತೆ 4 ತಾಲ್ಲೂಕು ವ್ಯಾಪ್ತಿಯ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
ರಾಮಾಪುರ, ಹನೂರು ಮತ್ತು ಯಳಂದೂರು ಠಾಣೆಯ 58 ಪೊಲೀಸರು ಸಾಮೂಹಿಕ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರ ಪೊಲೀಸರು ಮಂಡಿಸಿರುವ ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಬಗ್ಗೆ ಈ ಪೊಲೀಸರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಹಾಗಾಗಿ, ರಜೆ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದು, ಅವರು ಕೂಡ ಕರ್ತವ್ಯಕ್ಕೆ ಹಾಜರಾಗಿದ್ದರು.
ಜಿಲ್ಲೆಯಲ್ಲಿ 1,168 ಪೊಲೀಸ್ ಸಿಬ್ಬಂದಿ ಇದ್ದಾರೆ. ಈ ಮೊದಲೇ ಕೆಲವು ಸಿಬ್ಬಂದಿ ಮದುವೆ ಸೇರಿದಂತೆ ಇತರೇ ಕಾರ್ಯನಿಮಿತ್ತ ದೀರ್ಘಕಾಲ ರಜೆ ಪಡೆ ದಿದ್ದಾರೆ. ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಸಿಬ್ಬಂದಿ ಪಾಳಿ ಅನ್ವಯ ಕರ್ತವ್ಯ ನಿರ್ವಹಿಸಿದರು. ಎಲ್ಲ ಠಾಣೆ ಗಳಲ್ಲಿ ಶೇ 100ರಷ್ಟು ಹಾಜರಾತಿ ಇತ್ತು.
ಜತೆಗೆ, ಸರ್ಕಾರ ಎಸ್ಮಾ ಕಾಯ್ದೆಯಡಿ ಪೊಲೀಸ್ ಇಲಾಖೆಯನ್ನು ಸೇರಿಸಿದೆ. ಪ್ರತಿಭಟನೆ ನಡೆಸಿದರೆ ಸೇವೆಯಿಂದ ಅಮಾನತು ಅಥವಾ ವಜಾಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಯಾವುದೇ ಪೊಲೀಸರು ಪ್ರತಿಭಟನೆ ಮಾಡುವ ಸಾಹಸಕ್ಕೆ ಮುಂದಾಗಲಿಲ್ಲ.
ಪೊಲೀಸರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸುವ ಬಗ್ಗೆಯೂ ಸುದ್ದಿ ಹಬ್ಬಿತ್ತು. ಆದರೆ, ಪ್ರತಿಭಟನೆಗೆ ಮುಂದಾದರೆ ವಸತಿಗೃಹದಿಂದ ಹೊರಕ್ಕೆ ಕಳುಹಿಸುವ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದರು. ಹಾಗಾಗಿ, ಜಿಲ್ಲೆಯಲ್ಲಿ ಪೊಲೀಸರ ಕುಟುಂಬದ ಸದಸ್ಯರು ಪ್ರತಿಭಟನೆಗೆ ಮುಂದಾಗಲಿಲ್ಲ.
ಪೊಲೀಸ್ ಮಹಾಸಭಾ ಸಾಮಾಜಿಕ ತಾಣಗಳ ಮೂಲಕ ಕರೆ ನೀಡಿದ್ದ ಪೊಲೀಸರ ಮುಷ್ಕರಕ್ಕೆ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು, ರಾಜಕೀಯ ಮುಖಂಡರು ಬೆಂಬಲ ಘೋಷಿಸಿದ್ದರು. ಈ ಬಗ್ಗೆ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆಗೊಳಿಸಿದ್ದರು. ಅಂತಹ 10 ಸಂಘ, ಸಂಸ್ಥೆಗಳು ಸೇರಿದಂತೆ ರಾಜ ಕೀಯ ಮುಖಂಡರಿಗೆ ಪೊಲೀಸ್ ಇಲಾ ಖೆಯಿಂದ ನೋಟಿಸ್ ನೀಡಲಾಗಿದೆ.
‘ಇದು ನಮ್ಮ ಕುಟುಂಬದ ಸಮಸ್ಯೆ. ಇದನ್ನು ನಮ್ಮ ಪರಿಧಿಯಲ್ಲಿಯೇ ಬಗೆಹ ರಿಸಿಕೊಳ್ಳುತ್ತೇವೆ. ಸಂಘ, ಸಂಸ್ಥೆಗಳ ಮುಖಂಡರು ಬೆಂಬಲ ನೀಡುವ ನೆಪ ದಲ್ಲಿ ಪ್ರಚೋದನೆಗೆ ಮುಂದಾದರೆ ಅವರ ವಿರುದ್ಧ ಕಾನೂನು ಕ್ರಮಕೈಗೊ ಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎರಡು ದಿನದ ಹಿಂದೆಯೇ ಎಚ್ಚರಿಕೆ ರವಾನಿಸಿದ್ದರು.
ಕಾನೂನು ಕ್ರಮದ ಭೀತಿ ಎದುರಾದ ಪರಿಣಾಮ ಪೊಲೀಸರ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲು ಹಿಂಜರಿದರು. ಹೇಳಿಕೆ ನೀಡಿದ್ದ ರಾಜಕೀಯ ಮುಖಂಡರು ಕೂಡ ಮೌನಕ್ಕೆ ಶರಣಾಗಿದ್ದರು.
ಕೊಳ್ಳೇಗಾಲ ವರದಿ:
ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಪೊಲೀಸರು ಕರೆ ನೀಡಿದ್ದ ಮುಷ್ಕರಕ್ಕೆ ಕೊಳ್ಳೇಗಾಲ ಪಟ್ಟಣದಲ್ಲಿ ಪೊಲೀಸರು ಬೆಂಬಲ ಸೂಚಿಸದೆ ಎಂದಿನಂತೆ ಕರ್ತವ್ಯ ನಿರ್ವಹಿಸಿದರು.
ಪಟ್ಟಣ ಠಾಣೆ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಪೊಲೀಸರು ಗೈರುಹಾಜರಾ ಗದೆ ಎಂದಿನಂತೆ ಕರ್ತವ್ಯವನ್ನು ನಿರ್ವಹಿಸಿದರು. ಆದರೆ ಅವರಲ್ಲಿ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗದಿ ರುವ ಬಗ್ಗೆ ಅಸಮಾಧಾನ ಎದ್ದುಕಾಣುತ್ತಿತ್ತು.
ಪೊಲೀಸರು ಮುಷ್ಕರಕ್ಕೆ ಬೀದಿಗಿಳಿ ಯುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಪೊಲೀಸ್ ತುಕಡಿ ಹಾಗೂ ಹೆಚ್ಚುವರಿ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.