ಯಳಂದೂರು: ಅಧಿಕಾರಿಗಳು ಆಯಾ ಇಲಾಖೆಗೆ ಬಂದಿರುವ ಅನುದಾನಗಳನ್ನು ಈ ವರ್ಷದ ಡಿಸೆಂಬರ್ ಒಳಗೆ ಸದ್ಬಳಕೆ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಡಾ.ಎಸ್. ಪ್ರೇಮ್ಕುಮಾರ್ ಹೇಳಿದರು.
ಮಂಗಳವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ/ವರ್ಗಗಳಿಗೆ ಕಾದಿರಿಸಿದ ಹಣವನ್ನು ನಿಗದಿತ ಅವಧಿಯಲ್ಲಿ ಬಳಸಬೇಕು. 5 ತಿಂಗಳಷ್ಟೇ ಉಳಿದಿದ್ದು, ಬಹುಗ್ರಾಮಗಳ ಆಯ್ಕೆಗೂ ಅವಕಾಶವಿದೆ ಎಂದರು.
ಡೆಂಗಿ –ಜಾಗ್ರತೆಗೆ ಸಲಹೆ: ತಾಲ್ಲೂಕಿನಲ್ಲಿ ಕಲುಷಿತ ನೀರಿನ ಬಳಕೆಯಿಂದ ಸಾಂಕ್ರಾಮಿಕ ರೋಗ ವ್ಯಾಪಿಸಬಹುದು. ಸದ್ಯ ಡೆಂಗಿಯ ಎರಡು ಪ್ರಕರಣ ವರದಿಯಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪರಿಸರ ಸ್ವಚ್ಛವಾಗಿಡಲು ನಿವಾಸಿಗಳು ಆರೋಗ್ಯ ಇಲಾಖೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಜೊತೆ ಸಹಕರಿಸಬೇಕು ಎಂದು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಬಸವರಾಜು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು ಕೇಂದ್ರ ಹಾಗೂ ಡಯಾಲಿಸಿಸ್ ಕೇಂದ್ರ ತೆರೆಯಲು ಅವಕಾಶವಿದೆ. ಆದರೆ, ಜಾಗದ ಕೊರತೆಯಿದ್ದು ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.
ಟ್ಯಾಂಕ್ ಕಾಮಗಾರಿ ಮುಗಿಸಿ: ತಾಲ್ಲೂಕಿನ ಕೆಸ್ತೂರುನಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಐದು ವರ್ಷ ಕಳೆ ದರೂ ಮುಗಿದಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಜತೆಗೆ ಚರ್ಚಿಸಿ ಗಮನಹರಿಸಬೇಕು ಎಂದು ಅಧ್ಯಕ್ಷ ಪಂಚಾಯತ್ ರಾಜ್ ನೀರಾವರಿ ಎಇಇಗೆ ಎಚ್ಚರಿಕೆ ನೀಡಿದರು.
ತಾಲ್ಲೂಕಿನಲ್ಲಿ ಮೆಟ್ರಿಕ್ ನಂತರದ ಮಕ್ಕಳಿಗೆ ಹಾಸ್ಟೆಲ್ ತೆರೆಯಲು ಸ್ಥಳದ ಕೊರತೆ ಇದೆ. ಜಾಗ ಕೊಡಿಸಬೇಕು. ಸದ್ಯ ಬಾಡಿಗೆ ಕಟ್ಟಡ ಬಳಸಿಕೊಳ್ಳಲು ಅವಕಾಶವಿದ್ದು ಇದಕ್ಕೆ ಅನುಮೋದನೆ ನೀಡಬೇಕೆಂದು ಸಮಾಜ ಕಲ್ಯಾಣಾಧಿಕಾರಿ ಮನವಿ ಮಾಡಿದರು.
ಇದರೊಂದಿಗೆ ಶಿಕ್ಷಣ, ನೀರಾವರಿ, ನಿರ್ಮಿತಿ ಕೇಂದ್ರ, ಕೆಆರ್ಐಡಿಎಲ್, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಾ.ಪಂ. ಅಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷೆ ಪದ್ಮಾವತಿ ಮಹದೇವನಾಯಕ, ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ವೆಂಕಟೇಶ್, ಸಮಾಜ ಕಲ್ಯಾಣಾಧಿಕಾರಿ ಮಹಾದೇವ, ಬಿಇಒ ಮಲ್ಲಿಕಾರ್ಜುನ, ನಿರ್ಮಿತಿ ಕೇಂದ್ರದ ಜೆಇ ನಂದೀಶ, ಕೃಷಿ ಇಲಾಖೆ ರಮೇಶ್, ತೋಟಗಾರಿಕಾ ಇಲಾಖೆ ಭಾಸ್ಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.