ADVERTISEMENT

ದರೋಡೆ: 6 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 6:03 IST
Last Updated 12 ಜುಲೈ 2013, 6:03 IST

ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗೇಟ್ ಬಳಿ ಕಳೆದ ತಿಂಗಳು ನಡೆದಿದ್ದ ಅಪಹರಣ ಮತ್ತು ದರೋಡೆ ಪ್ರಕರಣವನ್ನು ಭೇದಿಸಿರುವ ಗುಂಡ್ಲುಪೇಟೆ ಪೋಲೀಸರು 6 ಆರೋಪಿಗಳನ್ನು ಬಂಧಿಸಿ, 1 ವಾಹನ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಜೂನ್ 6ರಂದು ನಸುಕಿನ 4.45ರ ಸಮಯದಲ್ಲಿ ಕೇರಳದ ಸಮೀರ್‌ಅಲಿ ಮತ್ತು ಅಫ್ಜಲ್ ಕಾರಿನಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದರು. ಬೇಗೂರು ಸಮೀಪದ ಹಿರೀಕಾಟಿ ಗೇಟ್ ಬಳಿ ಮೈಸೂರು ಕಡೆಯಿಂದ ಎರಡು ವಾಹನಗಳಲ್ಲಿ ಬಂದ 7-8 ಮಂದಿಯ ತಂಡ ಇವರ ಕಾರನ್ನು ತಡೆದು ವಾಹನ ಸಮೇತ  ಅವರ ಬಳಿ ಇದ್ದ ರೂ 50 ಸಾವಿರ,  4 ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಕಾರನ್ನು ದರೋಡೆ ಮಾಡಿತು. ಸಮೀರ್‌ಅಲಿ ಮತ್ತು ಅಫ್ಜಲ್ ಅವರನ್ನು ನಂಜನಗೂಡು ಪಕ್ಕ ಹೆಗ್ಗಡಹಳ್ಳಿಯಲ್ಲಿ ಕೈಕಾಲು ಕಟ್ಟಿ ಹಾಕಿ ಬಿಟ್ಟು ಹೋಗಿತ್ತು. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

ತನಿಖೆಯ ವೇಳೆ ಆರೋಪಿಗಳು ದರೋಡೆ ಮಾಡಿದ್ದ ಕಾರು ತಮಿಳುನಾಡಿನ ವೇಲೂರು ಜಿಲ್ಲೆಯ ಲತ್ತೇರಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಪತ್ತೆಯಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೋಲೀಸ್ ಅಧೀಕ್ಷಕ  ರಾಜೇಂದ್ರ ಪ್ರಸಾದ್, ಅಡಿಷನಲ್ ಎಸ್.ಪಿ. ಚಂದ್ರಶೇಖರ್ ಮತ್ತು  ಡಿವೈಎಸ್‌ಪಿ ಎಂ.ಎಸ್. ಗೀತಾ ಮಾರ್ಗದರ್ಶನದಲ್ಲಿ ಗುಂಡ್ಲುಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಚನ್ನೇಶ್ ನೇತೃತ್ವದಲ್ಲಿ ಒಂದ ತಂಡ ರಚಿಸಲಾಗಿತ್ತು.

ಈ ತಂಡವು ಕೇರಳದಲ್ಲಿ 1 ತಿಂಗಳ ಕಾಲ ಬೀಡು ಬಿಟ್ಟು ಜುಲೈ ತಿಂಗಳ 10ರಂದು ಖಚಿತ ಮಾಹಿತಿ ದೊರಕಿದ ಮೇರೆಗೆ ಬೆಂಗಳೂರಿನ ಬಾಣಸವಾಡಿಯಲ್ಲಿ ದಾಳಿ ಪ್ರಕರಣದಲ್ಲಿ ಆರೋಪಿಗಳಾದ ಕೇರಳ ರಾಜ್ಯದ ವೈನಾಡು ಜಿಲ್ಲೆ ಸುಲ್ತಾನ್ ಬತ್ತೇರಿಯ ಜೋಸ್, ಬಿಜು ಎನ್. ಜಾರ್ಜ್, ಕಾರ್ತಿಕ್, ಅವಿನಾಶ್ ಅಲಿಯಾಸ್ ಅಭಿ, ಆರ್. ಹರೀಶ್ ಬಾಬು ಅಲಿಯಾಸ್ ಪುಲಿಬಾಬು ಅವರನ್ನು ವಶಕ್ಕೆ ಪಡೆದು, ಅವರಿಂದ 1 ವಾಹನ ಹಾಗೂ ರೂ 10,07,000 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಗುಂಡ್ಲುಪೇಟೆ ವೃತ್ತ ನಿರೀಕ್ಷಕರಾದ ಚನ್ನೇಶ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಎಚ್.ಎನ್. ಬಾಲಕೃಷ್ಣ, ಅನಿಲ್‌ಕುಮಾರ್, ಶಶಿಕುಮಾರ್ ಹಾಗೂ ಸಿಬ್ಬಂದಿ ಪುಟ್ಟರಾಜು, ಹರೀಶ್, ಅನ್ಸರ್ ಪಾಷಾ, ಬಸವರಾಜು, ಜಗದೀಶ್ ಜಯರಾಂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT