ADVERTISEMENT

ನವೀಕರಣದ ಕನಸಲ್ಲಿ ವರಹಾಸ್ವಾಮಿ ದೇಗುಲ!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:00 IST
Last Updated 10 ಅಕ್ಟೋಬರ್ 2011, 8:00 IST
ನವೀಕರಣದ ಕನಸಲ್ಲಿ ವರಹಾಸ್ವಾಮಿ ದೇಗುಲ!
ನವೀಕರಣದ ಕನಸಲ್ಲಿ ವರಹಾಸ್ವಾಮಿ ದೇಗುಲ!   

ಯಳಂದೂರು: `ದೇಗುಲದ ಮಾಡಿನ ಮೇಲೆ ಬೆಳೆದಿರುವ ಹುಲ್ಲು ಹಾಗೂ ಮುಳ್ಳಿನ ಗಿಡ, ವಾಲಿಕೊಂಡ ಬಲಭಾಗದ ಕಲ್ಲಿನ ಗೋಡೆ, ಹಿಂಬದಿಯಲ್ಲಿ ನೆಲೆನಿಂತ ಮಳೆ ನೀರು. ಗೂಡುಗಳಲ್ಲಿ ಕಾಣೆಯಾದ ವಿಗ್ರಹ, ಬಿರುಕುಗಳಲ್ಲಿ ಬೆಳೆದಿರುವ ಅರಳಿಗಿಡ, ರಸ್ತೆ ಮೇಲೆದ್ದ ಪರಿಣಾಮ ತಳ ಸೇರಿದ ದೇಗುಲ ಪ್ರಾಂಗಣ. ಇದು ಭೂವರಹಲಕ್ಷ್ಮಿ ದೇವಳದ ಕತೆ.

ಯಳಂದೂರು ಪಟ್ಟಣದಲ್ಲಿರುವ 10ನೇ ಶತಮಾನಕ್ಕೆ ಸೇರಿದ ಪುರಾತನ ದೇವಾಲಯ ದುಸ್ಥಿತಿಯಲ್ಲಿದೆ. ಸುವರ್ಣಾವತಿ ನದಿದಂಡೆಯಲ್ಲಿ ಮಿಂದು ಇಲ್ಲಿಗೆ ಪೂಜೆಸಲ್ಲಿಸಲು ಅನುವಾಗುವಂತೆ ಜೈನ ಬಸದಿಯನ್ನು ವರಹಾಸ್ವಾಮಿ ದೇಗುಲವಾಗಿ ಮಾರ್ಪಡಿಸಲಾಗಿದೆ. ಪೂರ್ವ ಭಾಗಕ್ಕೆ ಮುಖ ಮಾಡಿ ನಿಂತಿರುವ ಪ್ರವೇಶ ದ್ವಾರದ ಮಾಡಿನಲ್ಲಿದ್ದ ವಿಗ್ರಹಗಳು ಈಗಿಲ್ಲ. ಸರಿಯಾದ ನಿರ್ವಹಣೆ ಇಲ್ಲದಿರುವುದು ಇಲ್ಲಿನ ಸಮಸ್ಯೆ.

ಗರ್ಭಗುಡಿ ಸೇರಿದಂತೆ 3 ಗೋಪುರ ಶಿಥಿಲಾವಸ್ಥೆಯಲ್ಲಿವೆ. ಇದಕ್ಕೆ ಹೊಂದಿಕೊಂಡಂತಿದ್ದ ದೇವರ ವಿಗ್ರಹಗಳು ಈಗಾಗಲೇ ಉದುರಿವೆ. ಕೆಲವೊಂದು ಉದುರಿಬೀಳುವ ಹಂತ ತಲುಪಿವೆ. ಬಲಭಾಗದ ಸುತ್ತು ಗೋಡೆ ಕಲ್ಲು ಮತ್ತು ಇಟ್ಟಿಗೆಯಿಂದ ನಿರ್ಮಿತವಾಗಿದ್ದು ರಸ್ತೆಗೆ ವಾಲಿಕೊಂಡಿವೆ. ಹಿಂಭಾಗದ ಗೋಡೆಯ ಬಳಿ ಮಳೆ ನೀರು ನಿಂತು ಮತ್ತಷ್ಟು ಕುಸಿತಕ್ಕೆ ಕಾರಣವಾಗಿದೆ. ಚರಂಡಿಯಲ್ಲೂ ಗಿಡ ಕಂಟಿಗಳು ಬೆಳೆದಿವೆ.

ಎಡ ಪಾರ್ಶ್ವದ ಗೋಡೆ ಗಣಪತಿ ಗುಡಿಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ದರ್ಶನ ಪಡೆಯುತ್ತಾರೆ. ಒಳಾಂಗಣದಲ್ಲಿರುವ ವರಹಾಸ್ವಾಮಿ-ಲಕ್ಷ್ಮಿ ದೇವರ ಸುಂದರ ಮೂರ್ತಿ ಹೋಳಿ ಹಬ್ಬದಂದು ವಿಶೇಷ ತೇರು ನಡೆಯುತ್ತದೆ. ಕೆಲವು ಜೈನಧರ್ಮ ಬಿಂಬಿಸುವ ಶಿಲಾ ಕಂಬಗಳು ಈಗಾಗಲೇ ಮಣ್ಣುಪಾಲಾಗಿದೆ. ಮಹಾವೀರನ ಶಿಲ್ಪಕಲ್ಪವೊಂದು ಮುಕ್ಕಾಗಿ ಮೂಲೆ ಸೇರಿದೆ. ಇವುಗಳ ದುರಸ್ತಿಗೆ ಗಮನ ಹರಿಸಬೇಕು ಎನ್ನುತ್ತಾರೆ ದೀಪಕ್ ಹಾಗೂ ಮಣಿಕಂಠ.

ರಥವನ್ನು ಇಕ್ಕಟ್ಟಾದ ಸ್ಥಳದಲ್ಲಿ ನಿಲ್ಲಿಸಲಾಗಿದೆ. ಹೊರ ಎಳೆಯಲೂ ಪ್ರಯಾಸಪಡಬೇಕು. ಚಾರಿತ್ರಿಕ ಮಹತ್ವ ಪಡೆದ ಇಂತಹ ದೇಗುಲದ ನವೀಕರಣಕ್ಕೆ ಸಂಬಂಧಪಟ್ಟ ಇಲಾಖೆ ಅಸ್ಥೆ ವಹಿಸಬೇಕಿದೆ. ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಇದನ್ನು ದುರಸ್ಥಿಗೊಳಿಸುವ ಭರವಸೆ ನೀಡುತ್ತಾರೆ ಹೊರತು ಇದುವರೆವಿಗೂ ಕಾಮಗಾರಿಗೆ ಚಾಲನೆ ನೀಡಿಲ್ಲ ಎಂಬುದು ಭಕ್ತರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.