ADVERTISEMENT

ಪ್ರಾಣಿಬಲಿ; ಸಾಮೂಹಿಕ ಆಂದೋಲನ ಅವಶ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2012, 5:30 IST
Last Updated 7 ಮೇ 2012, 5:30 IST

ಚಾಮರಾಜನಗರ: ಪ್ರಾಣಿಬಲಿ ತಡೆಗಟ್ಟುವ ಬಗ್ಗೆ ಸಾಮೂಹಿಕ ಆಂದೋಲನ ರೂಪಿಸಬೇಕಾಗಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ  ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿಗಿರಿಂಗನಬೆಟ್ಟದಲ್ಲಿ ನಡೆದ ದೊಡ್ಡ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಜಾತ್ರೆಗಳಲ್ಲಿ ಪ್ರಾಣಿ ಬಲಿಯನ್ನು ಮೌಢ್ಯದಿಂದ ಹಾಗೂ ಮೋಜಿಗಾಗಿ ಕೋಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳು ಮನಸ್ಸಿನ ನೆಮ್ಮದಿ ತಾಣಗಳಾಗಬೇಕು ಹೊರತು ವಧಾಲಯಗಳಾಗಬಾರದು. ಜನರೇ ಪ್ರಾಣಿಬಲಿ ಮಾಡುವುದನ್ನು ಸ್ವಯಂ ಬಿಟ್ಟಾಗ ಮಾತ್ರ ಆಂದೋಲನ ಯಶಸ್ವಿ ಆಗುತ್ತದೆ ಎಂದರು.

ಶಿವನಸಮುದ್ರದ ಮಾರಮ್ಮ ದೇವಾಲಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದರೂ ಕೂಡ ಪ್ರಾಣಿ ಬಲಿ ನಿರಂತರವಾಗಿ ನಡೆಯುತ್ತಿದೆ. ಇದನ್ನು  ಪ್ರಾಣಿ ಅಹಿಂಸಾ ಕ್ಷೇತ್ರವನ್ನಾಗಿ ಮಾಡಬೇಕು.  ಕಾನೂನನ್ನು ಉಲ್ಲಂಘಿಸಿ ನಡೆಯುತ್ತಿರುವ ಜಾನುವಾರುಗಳ ಹತ್ಯೆ ಹಾಗೂ ಹೋರ ರಾಜ್ಯಗಳಿಗೆ ಸಾಗಾಣಿಕೆಯನ್ನು ಮಾಡುವುದನ್ನು ತಡೆಗಟ್ಟಲು ಹಾಗೂ ಪ್ರಾಣಿಗಳ ಸಂರಕ್ಷಣೆ ಮಾಡಲು ವ್ಯಾಪಕ ಕ್ರಮ ಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರು, ಬೆಂಗಳೂರು, ಬೆಳಗಾವಿ, ಗುಲ್ಬರ್ಗಾ, ದಾವಣಗೆರೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಪ್ರಾಣಿ ಬಲಿ ವಿರುದ್ಧ ಜನ ಜಾಗೃತಿ ಮೂಡಿಸುವಂತಹ ಮಹಾ ಅಧಿವೇಶನವನ್ನು ನಡೆಸುವುದಾಗಿ ತಿಳಿಸಿದರು.
 ಮಹಿಳಾ ಸಂಚಾಲಕಿ ಸುನಂದಾದೇವಿ, ಸುಮಂಗಳಾದೇವಿ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.