ADVERTISEMENT

ಬೇಗೂರು: ಸಮಸ್ಯೆಗಳ ಬವಣೆ

ಎನ್.ನಾಗರಾಜ್
Published 15 ಫೆಬ್ರುವರಿ 2012, 8:00 IST
Last Updated 15 ಫೆಬ್ರುವರಿ 2012, 8:00 IST

ಗುಂಡ್ಲುಪೇಟೆ: ಹದಗೆಟ್ಟ ರಸ್ತೆಗಳು, ಕುಡಿಯುವ ನೀರಿಗೆ ತತ್ವಾರ, ಬೀದಿ ದೀಪ ಇಲ್ಲದಿರು ವುದು, ಶೌಚಾಲಯಗಳ ಕೊರತೆ... ಇವು ತಾಲ್ಲೂಕಿನ ಹೋಬಳಿ ಕೇಂದ್ರ ಬೇಗೂರಿನ ಸಮಸ್ಯೆಗಳು.

ಗ್ರಾಮದಲ್ಲಿನ ಚರಂಡಿಗಳ ದುಸ್ಥಿತಿ ಹೇಳತೀರದು, ಹಲವೆಡೆ ಬೀದಿ ದೀಪಗಳು ಉರಿಯುವುದಿಲ್ಲ. ರಸ್ತೆಗಳು ತೀವ್ರ ಹದಗೆಟ್ಟಿದ್ದು, ಮಳೆ ಬಂದರೆ  ಸಂಚಾರ ದುಸ್ತರ ಎಂದು ದೂರುತ್ತಾರೆ ಗ್ರಾಮಸ್ಥರು.

ಜನಪತ್ರಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಹಂತದಲ್ಲಿದೆ, ಇಲ್ಲಿಗೆ ಇನ್ನೂ ಎರಡು ಟ್ಯಾಂಕ್‌ಗಳ ಅಗತ್ಯ ಇದೆ.  ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ದೂರುತ್ತಾರೆ ಗ್ರಾಮದ ಯುವಕ ಪ್ರಶಾಂತ್.
ಗ್ರಾಮಕ್ಕೆ ಕಬಿನಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದರೂ ಟ್ಯಾಂಕ್‌ಗಳಿಲ್ಲದ ಕಾರಣ ಸಂಗ್ರಹ ಸಾಧ್ಯವಾಗಿಲ್ಲ.

ಸಾರಿಗೆ ಬಸ್ ನಿಲ್ದಾಣದ ಸಮೀಪ ಇರುವ ಕಲಾ ಮಂದಿರದ ಮುಂದೆ ಪಾರ್ಥೇನಿಯಂ ಕಳೆ ಹಾಗೂ ಕಸದ ರಾಶಿ ಬಿದ್ದಿದ್ದರೂ ಸ್ವಚ್ಛಗೊಳಿಸಿಲ್ಲ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸ ಬೇಕು. ಗ್ರಾಮದಲ್ಲಿ ನೈರ್ಮಲ್ಯತೆ ಕಾಪಾಡಲು ಗ್ರಾಮ ಪಂಚಾಯಿತಿ ವತಿಯಿಂದ  ಕ್ರಮ ಕೈಗೊಳ್ಳಬೇಕು ಹಾಗೂ ನಿವೇಶನರಹಿತರನ್ನು ಗುರುತಿಸಿ ಅವರಿಗೆ ವಿವಿಧ ಯೋಜನೆಯಡಿ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಶಯ. 

 ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸ ಬೇಕು ಎನ್ನುವುದು ಗ್ರಾಮಸ್ಥರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.