ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:43 IST
Last Updated 18 ಡಿಸೆಂಬರ್ 2012, 10:43 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಳ್ಳೇಗಾಲ ಪಟ್ಟಣದಲ್ಲಿ ಸೋಮವಾರ ಆಶಾಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯ ಸಂಚಾಲಕ ಶಶಿಧರ್, ಚಂದ್ರಶೇಖರ್ ಇದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಳ್ಳೇಗಾಲ ಪಟ್ಟಣದಲ್ಲಿ ಸೋಮವಾರ ಆಶಾಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯ ಸಂಚಾಲಕ ಶಶಿಧರ್, ಚಂದ್ರಶೇಖರ್ ಇದ್ದಾರೆ.   

ಕೊಳ್ಳೇಗಾಲ: `ರಾಜ್ಯ ಸರ್ಕಾರ ಆಶಾಕಾರ್ಯಕರ್ತೆಯರಿಗೆ ನಿಗದಿತ ವೇತನ ನೀಡಿ ಸಾಮಾಜಿಕ ಭದ್ರತೆ ಒದಗಿಸಬೇಕು' ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ರಾಜ್ಯ ಸಂಚಾಲಕ ಶಶಿಧರ್ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ತಮ್ಮ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸೋಮವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆ ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಮೊದಲ ಹಂತ ಮುಗಿದಿದೆ. ರಾಜ್ಯದ ಆರೋಗ್ಯ ಇಲಾಖೆಯಲ್ಲಿ 30ಸಾವಿರ ಆಶಾ ಕಾರ್ಯಕರ್ತೆಯರು ಉತ್ತಮ ಸೇವೆ ಸಲ್ಲಿಸಿ ಇಲಾಖೆ ಮತ್ತು ಜನತೆಯಿಂದ ಮೆಚ್ಚುಗೆಗಳಿಸಿದ್ದಾರೆ. ಆಶಾಕಾರ್ಯಕರ್ತೆಯರ ಅವಿರತ ಶ್ರಮದ ಫಲವಾಗಿ ಈ ಹಿಂದೆ ಹೆರಿಗೆ ಸಮಯದಲ್ಲಿ ಸಂಭವಿಸುತ್ತಿದ್ದ ಬಾಣಂತಿಯರ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿದೆ. ಆದರೆ, ಇದನ್ನೇ ನಂಬಿದ ಆಶಾಕಾರ್ಯಕರ್ತೆಯರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಸ್ಥಿತಿ ಶೋಚನೀಯವಾಗಿದೆ ಎಂದು ತಿಳಿಸಿದರು.

ಸಂಘದ ಸಲಹೆಗಾರ ಚಂದ್ರಶೇಖರ್ ಮಾತನಾಡಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಮಾಸಿಕ ವೇತನ, ಕನಿಷ್ಟ ಸೌಲಭ್ಯಗಳನ್ನೂ ಖಾತ್ರಿಪಡಿಸದೆ ಆಶಾಕಾರ್ಯಕರ್ತೆಯರನ್ನು ನಿರ್ಲಕ್ಷಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಎಂಜಿಎಸ್‌ವಿ ಪದವಿ ಪೂರ್ವ ಕಾಲೇಜಿನಿಂದ ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಘೋಷಣೆಗಳೊಡನೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅಶಾಕಾರ್ಯಕರ್ತೆಯರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿ ತಾಲ್ಲೂಕು ಕಚೇರಿಯಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಆಶಾಕಾರ್ಯಕರ್ತೆಯರ ತಾಲ್ಲೂಕು ಸಂಘದ ಮುಖಂಡರಾದ ಪುಟ್ಟಬಸಮ್ಮ, ಚೆನ್ನಾಜಮ್ಮ, ಎಂ. ಸುಮತಿ, ಲತಾಮಣಿ, ಸುಲೋಚನಾ, ಎಸ್.ಆರ್.ಶಿವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.