ADVERTISEMENT

ಭೂಮಾಪನ ಇಲಾಖೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:55 IST
Last Updated 17 ಅಕ್ಟೋಬರ್ 2012, 9:55 IST

ಚಾಮರಾಜನಗರ: ಭೂಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ರೈತರ ಸಮಸ್ಯೆ ಬಗೆಹ ರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ನಗರದ ತಾಲ್ಲೂಕು ಕಚೇರಿ ಮುಂಭಾಗ ರೈತ ಹಿತರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಭೂಮಾಪನ ಇಲಾಖೆಯಲ್ಲಿ 11ಇ ಸ್ಕೆಚ್ ನೀಡಲು 600 ರೂ ಶುಲ್ಕ ಪಡೆಯಲಾಗುತ್ತಿದೆ. ಇದರಲ್ಲಿ 300 ರೂಗಳನ್ನು ಪರವಾನಗಿ ಭೂಮಾ ಪಕರಿಗೆ ನೀಡಲಾಗುತ್ತಿದೆ. ಉಳಿದ ಹಣಕ್ಕೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

11ಇ ಅಲಿಲೇಷನ್ ಸ್ಕೆಚ್‌ಗೆ 600 ರೂ ನಿಗದಿ ಮಾಡಲಾಗಿದೆ. ಈ ಕಾರ್ಯವನ್ನು ಸರ್ಕಾರಿ ಭೂಮಾಪಕರೇ ನಿರ್ವಹಿಸುತ್ತಾರೆ. ಹಣವನ್ನು ಯಾವ ಆಧಾರದಲ್ಲಿ ಪರವಾನಗಿ ಭೂಮಾ ಪಕರು ತಮ್ಮ ಕಿಸೆಗೆ ಹಾಕಿಕೊ ಳ್ಳುತ್ತಿದ್ದಾರೆ ಎಂಬುದು ರೈತರಿಗೆ ತಿಳಿಯುತ್ತಿಲ್ಲ ಎಂದು ಆರೋಪಿಸಿದರು.

ಸುಮಾರು ಮೂರು ವರ್ಷದಿಂದ ಭೂಮಾಪಕರು ಸಮರ್ಪಕವಾಗಿ ಅಳತೆ ಕಾರ್ಯ ನಿರ್ವಹಿಸುತ್ತಿಲ್ಲ. ಐಎಂಪಿ(ಪೋಡಿ ವಿಭಜನೆ) ಕಾರ್ಯ ನಿಧಾನವಾಗಿ ಸಾಗುತ್ತಿದೆ. ಇದರ ಪರಿಣಾಮ ರೈತರ ಖಾತೆ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದು  ದೂರಿದರು.

ಕಳೆದ 15ದಿನಗಳಿಂದ ಪರವಾನಗಿ ಭೂಮಾಪಕರು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ರೈತರು ಕ್ರಯ ಮತ್ತು ಖಾತೆ ಮಾಡಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಕಚೇರಿಗಳಿಗೆ ಅಲೆದಾಡುವಂತಾಗಿದೆ. ರಾಜ್ಯ ಸರ್ಕಾರ ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಸರ್ವೇಯರ್ ಹುದ್ದೆ ಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ತ್ವರಿತವಾಗಿ ರೈತರ ಕೆಲಸಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಹಿತರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಆಲೂರು ಮಲ್ಲು, ಪ್ರಧಾನ ಕಾರ್ಯದರ್ಶಿ ರಾಜಶೇಖರ ಬಸವನ ಪುರ, ಸಿ.ಎಂ. ಶಂಕರ, ಕೋಡಿಮೋಳೆ ಗೋವಿಂದಶೆಟ್ಟಿ, ಸಿ.ಆರ್. ಮಹೇಶ್, ಮಂಜುನಾಥಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.