ಕೊಳ್ಳೇಗಾಲ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು, ತಾಲ್ಲೂಕಿನ ಮೋಡಹಳ್ಳಿ ಸಮೀಪದ ಅದಾನಿ ಸೋಲಾರ್ ಪ್ಲಾಟ್ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಧುವನಹಳ್ಳಿ, ಕಾಮಗೆರೆ, ದೊಡ್ಡಿಂದುವಾಡಿ, ಸಿಂಗನಲ್ಲೂರು, ಮೋಡಹಳ್ಳಿ, ಕೊಂಗರಹಳ್ಳಿಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕಾಗಿ ಕೆಐಎಡಿಬಿ ಎಂಟು ವರ್ಷಗಳ ಹಿಂದೆ ಸುಮಾರು 150 ರೈತರಿಂದ 415 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ರೈತ ಕುಟುಂಬಗಳಿಗೆ ಪರಿಹಾರ ಹಾಗೂ ಕೆಲಸ ಕೊಡುವುದಾಗಿ ಹೇಳಿತ್ತು. ಆದರೆ, ಈ ಭೂಮಿಯನ್ನು ಅದಾನಿ ಕಂಪೆನಿಗೆ ಮಾರಾಟ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದು, ಶೇ 15ರಷ್ಟು ಬಡ್ಡಿ ದರದೊಂದಿಗೆ ಪರಿಹಾರ ಹಣ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಆದರೂ, ಪರಿಹಾರ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ಜಮೀನಿಗೆ ತಕ್ಕ ಪರಿಹಾರ ನೀಡಬೇಕು. ಕುಂಟುಬದ ಸದಸ್ಯರಿಗೆ ಕೆಲಸ ಕೊಡಬೇಕು’ ಎಂದು ಒತ್ತಾಯಿಸಿದರು. ರೈತರಾದ ಕೃಷ್ಣಶೆಟ್ಟಿ, ಅಂಥೋಣಿ, ಗೊಂವಿಂದರಾಜು, ನಾಗರಾಜು, ಸಿದ್ದರಾಜು, ಶಿವಮಲ್ಲು, ಬಸವರಾಜು, ಬಸವಯ್ಯ, ಕೃಷ್ಣಪ್ಪ, ಮಹದೇವಸ್ವಾಮಿ, ಭೈರವ, ರಂಗಸ್ವಾಮಿ, ಮಾದೇಗೌಡ, ವೆಂಕಟಯ್ಯ, ನಂಜಯ್ಯ, ರಾಚಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.