ADVERTISEMENT

ವಿಶ್ವಕರ್ಮರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ: ನಂಜುಂಡಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 8:30 IST
Last Updated 9 ಸೆಪ್ಟೆಂಬರ್ 2011, 8:30 IST

ಚಾಮರಾಜನಗರ: `ವಿಶ್ವಕರ್ಮ ಜನಾಂಗಕ್ಕೆ ಸೂಕ್ತ ಮೀಸಲಾತಿ ಸೌಲಭ್ಯ ಹಾಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ~ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ದೂರಿದರು.

ಮೈಸೂರಿನಲ್ಲಿ ಸೆ. 17ರಂದು ನಡೆಯುವ 3ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವದ ಅಂಗವಾಗಿ ನಗರದ ಜೆ.ಎಚ್. ಪಟೇಲ್ ಸಭಾಂಗ ಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 35 ಲಕ್ಷದಷ್ಟು ವಿಶ್ವಕರ್ಮ ಸಮಾಜ ದವರಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಎರಡನೇ ಅತಿದೊಡ್ಡ ಸಮುದಾಯಕ್ಕೆ ಮಾತ್ರ ಸೌಲಭ್ಯ ಸಿಗುತ್ತಿಲ್ಲ. ಸಂಘಟಿತರಾದರೆ ಮಾತ್ರ ಸರ್ಕಾರಿ ಸೌಲಭ್ಯ ದಕ್ಕುತ್ತವೆ. ಸರ್ಕಾರ  ಸವಲತ್ತು ಕಲ್ಪಿಸುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ವಿಶ್ವಕರ್ಮ ಜನಾಂಗಕ್ಕೆ ಶೇ. 3ರಷ್ಟು ಮೀಸಲಾತಿ ಸೌಲಭ್ಯ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು. ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಚಿನ್ನ-ಬೆಳ್ಳಿ ಕೆಲಸಗಾರರ ಮೇಲೆ ಪೊಲೀಸರು ಅನಗತ್ಯವಾಗಿ ದೌರ್ಜನ್ಯ ಎಸಗು ತ್ತಿದ್ದಾರೆ. ಕಳ್ಳನನ್ನು ನಂಬುವ ಅಧಿಕಾರಿಗಳಿಗೆ ಆಭರಣ ತಯಾರಿಸುವ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆಭರಣ ತಯಾರಕರ ಮೇಲೆ ದೂರು ದಾಖಲಿಸುವ ಮುನ್ನ ಸಂಘ-ಸಂಸ್ಥೆಗ ಂದಿಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಹೊರರಾಜ್ಯಗಳಿಂದ ತೆರಿಗೆ ರಹಿತವಾಗಿ ರಾಜ್ಯದೊಳಕ್ಕೆ ಚಿನ್ನಾಭರಣ ಪೂರೈಕೆಯಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಅಂಥ ರೆಡಿಮೇಡ್ ಆಭರಣದ ಮೇಲೆ ತೆರಿಗೆ ವಿಧಿಸಬೇಕು. ಕಬ್ಬಿಣ ಮತ್ತು ಮರಗೆಲಸ ಮಾಡುವ ವಿಶ್ವಕರ್ಮ ಜನಾಂಗದವರಿಗೆ ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕ ಶೆಡ್ ನಿರ್ಮಿಸಿ ಕೊಡಬೇಕು ಎಂದರು.

ವಿಶ್ವಕರ್ಮ ಸಮಾಜದ 67 ಮಠಗಳಿಗೆ ಸರ್ಕಾರ ನಿವೇಶನ ಮಂಜೂರು ಮಾಡಬೇಕು. ಸೆ. 17ರಂದು ಸರ್ಕಾರದ ಮಟ್ಟದಲ್ಲಿ ವಿಶ್ವಕರ್ಮ ಜಯಂತಿ ಆಚರಿಸುವ ಮೂಲಕ ಅಂದು ಸರ್ಕಾರಿ ರಜೆ ಘೋಷಣೆಗೆ ಕ್ರಮಕೈಗೊಳ್ಳಬೇಕು ಎಂದರು.

ಮೈಸೂರಿನಲ್ಲಿ ಹಮ್ಮಿಕೊಂಡಿರುವ ಜಯಂತ್ಯು ತ್ಸವ ಜಾತ್ಯತೀತವಾಗಿ ನಡೆಯಲಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟನೆ ನೆರವೇರಿಸ ಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಧ್ಯಕ್ಷತೆವಹಿಸಲಿದ್ದಾರೆ. ಪಂಚಲೋಹದಿಂದ ನಿರ್ಮಿಸಿರುವ ವಿಶ್ವಕರ್ಮರ 250 ಕೆಜಿ ತೂಕದ ಪುತ್ಥಳಿಯ ಮೆರವಣಿಗೆ ನಡೆಯಲಿದೆ ಎಂದರು.

ಸಭೆಯಲ್ಲಿ ಮುಖಂಡರಾದ ಚಂದ್ರು, ಸತೀಶ್‌ಕುಮಾರ್, ಬಿ. ಮುರುಗೇಶ್ ಸೇರಿದಂತೆ ಸಮಾಜ ಬಾಂಧವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.