ADVERTISEMENT

ವ್ಯಾಘ್ರನ ಸೆರೆಗೆ ಅಭಿಮನ್ಯು ಬಳಕೆ

ಮುಂದುವರಿದ ಹುಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 8:37 IST
Last Updated 1 ಜನವರಿ 2014, 8:37 IST

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನರಭಕ್ಷಕ ಹುಲಿಯ ಸೆರೆಗೆ ಮಂಗಳವಾರವೂ ಕಾರ್ಯಾಚರಣೆ ನಡೆಯಿತು. ಆದರೆ, ಅಭಿಮನ್ಯು ನಾಯಕತ್ವದಲ್ಲಿ ಸಂಜೆವರೆಗೂ ಹುಡುಕಾಟ ನಡೆಸಿದರೂ ನರಭಕ್ಷಕ ಹುಲಿ ಪತ್ತೆಯಾಗಲಿಲ್ಲ.

ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನರಭಕ್ಷಕ ಹುಲಿಯ ಸೆರೆಗೆ ಕೈಗೊಂಡಿರುವ ಕಾರ್ಯಾಚರಣೆ ಮಂಗಳವಾರವೂ ಫಲಪ್ರದವಾಗಲಿಲ್ಲ. ಹುಲಿ ಯೋಜನೆ ನಿರ್ದೇಶಕ ಎಚ್.ಸಿ. ಕಾಂತರಾಜು ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ತಂಡ ಮತ್ತು ಅಭಿಮನ್ಯುವಿನ ನೇತೃತ್ವದಲ್ಲಿ ಗಜಪಡೆ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆ ಗೊಂದಲದ­ಗೂಡಾಗಿದೆ. ಸೋಮವಾರ ದರ್ಶನ ನೀಡಿದ್ದ ತಾಯಿ ಹಾಗೂ ಮರಿ ಹುಲಿಯ ಸೆರೆ ಪ್ರಯತ್ನ ನಡೆಸಲಾಯಿತು. ಆದರೆ, ಅದೇ ಪ್ರದೇಶದಲ್ಲಿ ಮತ್ತೊಂದು ಹುಲಿ ಕಾಣಿಸಿಕೊಂಡಿರುವುದರಿಂದ ಅರಣ್ಯ ಸಿಬ್ಬಂದಿ ಗೊಂದಲಕ್ಕೀಡಾಗಿ ಸೆರೆಯ ಪ್ರಯತ್ನಕ್ಕೆ ಹಿನ್ನೆಡೆಯಾಯಿತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಯೊಬ್ಬರು ಬುಧವಾರ ಮುಂದುವರಿಯಲಿರುವ ಕಾರ್ಯಾಚರಣೆಗೆ ಸಹಕರಿಸಲಿದ್ದಾರೆ. ಬುಧವಾರವೂ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹುಲಿ ಯೋಜನೆ ನಿರ್ದೇಶಕ ಎಚ್.ಸಿ. ಕಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.