ADVERTISEMENT

ಸೆಸ್ಕ್ ಅಧಿಕಾರಿಗಳ ವಿರುದ್ಧ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 5:10 IST
Last Updated 13 ಅಕ್ಟೋಬರ್ 2012, 5:10 IST

ಕೊಳ್ಳೇಗಾಲ: ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಸೆಸ್ಕ್ ಅಧಿಕಾರಿಗಳು ವಿದ್ಯುತ್ ನಿಲುಗಡೆಗೆ ಮುಂದಾಗಿ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದು ಶುಕ್ರವಾರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕೆಂಪನಪಾಳ್ಯ ಗ್ರಾಮದ ಗ್ರಾಹಕರಿಂದ ಸೆಸ್ಕ್‌ಗೆ 2,24,884 ರೂ. ಬಾಕಿ ಬರಬೇಕಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸೆಸ್ಕ್ ಅಧಿಕಾರಿಗಳು ಸಿಬ್ಬಂದಿಯೊಡನೆ ಗ್ರಾಮಕ್ಕೆ ತೆರಳಿ ವಿದ್ಯುತ್ ಬಾಕಿ ಪಾವತಿಸದ ಗ್ರಾಹಕರ ಮನೆಯ ವಿದ್ಯುತ್ ನಿಲುಗಡೆಗೆ ಮುಂದಾದರು.

ಸೆಸ್ಕ್ ಅಧಿಕಾರಿಗಳ ಈ ಕ್ರಮದ ವಿರುದ್ಧ ರೈತ ಮುಖಂಡ ಶೈಲೇಂದ್ರ ಅವರ ನೇತೃತ್ವದಲ್ಲಿ ತಿರುಗಿಬಿದ್ದ ಗ್ರಾಹಕರು ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್ ಸಂಪರ್ಕ ನಿಲುಗಡೆಗೆ ಮುಂದಾಗದಂತೆ ವಾಗ್ವಾದ ನಡೆಸಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಚಾರ ತಿಳಿದ ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಸಿಬ್ಬಂದಿಯೊಡನೆ ಸ್ಥಳಕ್ಕೆ ತೆರಳಿ ಗ್ರಾಹಕರನ್ನು ಸಮಾಧಾನ ಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.