ADVERTISEMENT

305 ಹಳ್ಳಿಗೆ ಕಾವೇರಿ ನೀರು: ಧ್ರುವನಾರಾಯಣ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 7:40 IST
Last Updated 18 ಅಕ್ಟೋಬರ್ 2012, 7:40 IST

ಕೊಳ್ಳೇಗಾಲ: ಜಿಲ್ಲೆಯ 305 ಹಳ್ಳಿ ಗಳಿಗೆ ಕಾವೇರಿ ನದಿಯಿಂದ ಕುಡಿ ಯುವ ನೀರುಪೂರೈಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ್ದ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಮಾಹಿತಿ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೌದಳ್ಳಿ ಪಂಚಾಯಿತಿ 2011-12ನೇ ಸಾಲಿನಲ್ಲಿ 2.19ಕೋಟಿ ಕಾಮಗಾರಿಗಳನ್ನು ನಡೆಸಿ ಜಿಲ್ಲೆಯಲ್ಲೇ ಅತಿಹೆಚ್ಚಿನ ಅಭಿವೃದ್ಧಿ ಮಾಡಿದ್ದು ಗುಂಡ್ಲುಪೇಟೆ ತಾಲ್ಲೂಕು ಅತಿ ಕಡಿಮೆ ಕಾಮಗಾರಿ ನಡೆದಿದೆ ಎಂದು ತಿಳಿಸಿದರು.

ಗ್ರಾಮಗಳ ರಸ್ತೆ33 ಬದಿಯಲ್ಲಿನ ಬಹಿರ್ದೆಸೆ ಪದ್ದತಿ ಇನ್ನೂ ಜೀವಂತ ಇರುವುದು ಪ್ರತಿಯೊಬ್ಬರೂ ತಲೆತಗ್ಗಿಸುವ ಸಂಗತಿ. ಈ ಅನಿಷ್ಠ ಪದ್ಧತಿ ದೂರಮಾಡಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ ಕಾರ್ಯಕ್ರಮ ರೂಪಿಸಿದ್ದು ಪ್ರತಿಯೊಂದು ಕುಟುಂಬದಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಶಾಸಕ ಆರ್.ನರೇಂದ್ರ ಮಾತನಾಡಿ ಬರದಿಂದ ತತ್ತರಿಸಿದ್ದ ಜನರು ಬೇರೆ ಸ್ಥಳಗಳಿಗೆ ಗುಳೆಹೋಗದಂತೆ ತಡೆಯುವಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಕಾರಿಯಾಗಿದೆ ಎಂದರು.
 
ಉಡುತೊರೆ ಜಲಾಶಯದಿಂದ ಅಜ್ಜೀಪುರ, ರಾಮಾಪುರ, ಹಾಗೂ ಕಾವೇರಿ ನದಿಯಿಂದ ಕುರಟ್ಟಿ ಹೊಸೂರು, ಮಾರ್ಟಳ್ಳಿ ಕೌದಳ್ಳಿ ಹಾಗೂ ಮಾರ್ಗಮಧ್ಯದ ಗ್ರಾಮಗಳಿಗೆ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಂಕರ್‌ರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗಲಾಂಬಿಕೆ ಉಪಾಧ್ಯಕ್ಷ ಮಲ್ಲಯ್ಯ, ಸದಸ್ಯ ಮುರುಳಿ, ಅನಿಲ್, ಪುಟ್ಟರಾಜು, ಅಧ್ಯಕ್ಷ ಮೆಹಬೂಬ್ ಷರೀಫ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹದೇವಸ್ವಾಮಿ, ನಿಂಗಶಟ್ಟಿ, ಸತೀಶ್‌ಚಂದ್ರ, ಕಾರ್ಯದರ್ಶಿ ನಂಜುಂಡಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.