ADVERTISEMENT

6ಮಂದಿ ಹುಲಿ ಹಂತಕರಿಗೆ ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 10:20 IST
Last Updated 17 ಆಗಸ್ಟ್ 2012, 10:20 IST

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದ 6 ಮಂದಿ ಹುಲಿ ಹಂತಕರಿಗೆ ಜಾಮೀನು ನೀಡಲು ನಗರದ ಜಿಲ್ಲಾ ಶೀಘ್ರ ವಿಲೇವಾರಿ ನ್ಯಾಯಾಲಯ ನಿರಾಕರಿಸಿದೆ.

ಮೂಲತಃ ಹರಿಯಾಣಕ್ಕೆ ಸೇರಿದ ಜಗದೀಶ್, ಜಾಲರ್‌ಸಿಂಗ್ ಅಲಿಯಾಸ್ ಡೈಲಿಸಿಂಗ್, ಲಕುಮ್‌ಚಂದ್, ರೋಟಾಸ್, ಬಿಮಲ್‌ದೇವಿ ಹಾಗೂ ಪಪ್ಪು ಎಂಬುವರನ್ನು ಬಂಧಿಸಲಾಗಿತ್ತು. ಗುಂಡಾಲ್ ಜಲಾಶಯದ ಬಳಿ ಹುಲಿ ಬೇಟೆಗೆ ಸಂಚು ನಡೆಸಿದ್ದ ಆರೋಪಿಗಳು ಅರಣ್ಯದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹುಲಿ ಹಂತಕರೆಂಬ ಸತ್ಯ ಬಯಲಾಗಿತ್ತು.

ಬಂಧಿತರಿಂದ ಹಾಲಹಳ್ಳ, ಗೊಟ್ಟಿಗೆರೆ ಹಾಗೂ ಅಣಬಕೆರೆ ಪ್ರದೇಶದಲ್ಲಿ ಅಳವಡಿಸಿದ್ದ ಮೂರು ಜಾಟ್ರಾಪ್ ಹಾಗೂ ಚಿರತೆಯ ನಾಲ್ಕು ಉಗುರು ವಶಪಡಿಸಿಕೊಳ್ಳಲಾಗಿತ್ತು. ಈ ಆರೋಪಿಗಳು ಅಂತರರಾಜ್ಯ ವನ್ಯಜೀವಿ ಹಂತಕರಾಗಿದ್ದು, ಅರುಣಾಚಲ ಪ್ರದೇಶದಲ್ಲಿ ನೀರುನಾಯಿ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿತ್ತು. ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಚ್.ಮಲ್ಲಪ್ಪ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಸರ್ಕಾರಿ ಅಭಿಯೋಜಕ ಬಸವರಾಜ ಹುಡೇದಗಡ್ಡಿ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.