ಚಾಮರಾಜನಗರ: ‘ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಮೆರಗು ನೀಡುವಂತೆ ₹ 7.40ಕೋಟಿ ವೆಚ್ಚದಡಿ ಆಧುನಿಕ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಸಂತೇಮರಹಳ್ಳಿ ವೃತ್ತದ ಸಮೀಪದ ಆಂಜನೇಯ ದೇವಸ್ಥಾನದ ಬಳಿ ಆಧುನಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರಸಭೆಯ ನಿವೇಶನದಲ್ಲಿ ₹ 4.50 ಕೋಟಿ ವೆಚ್ಚದಡಿ ಆಧುನಿಕ ಮಾರುಕಟ್ಟೆ ಹಾಗೂ ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿ ₹ 2.90 ಕೋಟಿ ವೆಚ್ಚದಡಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ಸಂಕೀರ್ಣಗಳ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ನಾಗರಿಕರು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಾಹನ ನಿಲುಗಡೆ ಸ್ಥಳ, ಸಾಮಗ್ರಿಗಳ ಉಗ್ರಾಣ, ರ್ಯಾಂಪ್, ಅಂಗಡಿ ಮಳಿಗೆಗಳು, ಶೌಚಾಲಯ ಮುಂತಾದವುಗಳನ್ನು ಒಳಗೊಂಡ ಆಧುನಿಕ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು, ನಗರದ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದರು.
ಮಾರುಕಟ್ಟೆ ಸಂಕೀರ್ಣಗಳ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ನಿರ್ವಹಿಸುವಂತೆ ಸ್ಥಳದಲ್ಲಿದ್ದ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಸಾಮಾಜಿಕ ನ್ಯಾಯದಡಿ ಪ್ರತಿ ವರ್ಗ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಆರ್.ಎಂ. ರಾಜಪ್ಪ, ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಆರ್. ಉಮೇಶ್, ನಗರಸಭೆ ಸದಸ್ಯರಾದ ಚಿನ್ನಸ್ವಾಮಿ, ಎಸ್. ನಂಜುಂಡಸ್ವಾಮಿ, ಚೆಂಗುಮಣಿ, ಗೋಪಾಲಕೃಷ್ಣ, ಮಹೇಶ್ ಉಪ್ಪಾರ್, ಎಇಇ ವಿಜಯ್ಕುಮಾರ್, ಎಂಜಿನಿಯರ್ ಲತಾ, ಗುತ್ತಿಗೆದಾರ ಸಿದ್ದಪ್ಪ, ಮುಖಂಡ ಸುರೇಶ್ನಾಯಕ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.