ಕೊಳ್ಳೇಗಾಲ: ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ಉತ್ಸವ ಸಂದರ್ಭದಲ್ಲಿ ಅನ್ಯಕೋಮಿನ ಗುಂಪೊಂದು ಪರಿಶಿಷ್ಟ ಜಾತಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಕಾರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಪರಿಶಿಷ್ಟ ಜಾತಿಯ ವಿಜಯ್ ಕುಮಾರ್ ಜಾತಿ ನಿಂದನೆಗೆ ಒಳಗಾದ ವ್ಯಕ್ತಿ. ಇದೇ ಗ್ರಾಮದ ಅನ್ಯ ಕೋಮಿನ ಭರತ್, ಮಹದೇವ ಪ್ರಸಾದ್, ಮಧು, ಮಹದೇವಸ್ವಾಮಿ, ಸಿದ್ದಲಿಂಗ ಸ್ವಾಮಿ ಪ್ರಕರಣದ ಆರೋಪಿಗಳು.
ಸಿದ್ದೇಶ್ವರ ಸ್ವಾಮಿ ಉತ್ಸವ ಸಂದರ್ಭದಲ್ಲಿ ಮಠದ ಮುಂಭಾಗದಲ್ಲಿ ನಿಂತಿದ್ದ ವಿಜಯಕುಮಾರ್ ಅವರನ್ನು ಆರೋಪಿಗಳು ಜಾತಿ ನಿಂದನೆ ಗೈದು ಕೊಲೆ ಬೆದರಿಕೆ ಹಾಕುವುದಲ್ಲದೆ ಹಲ್ಲೆ ನಡೆಸಿದ್ದಾರೆ. ಜಾತ್ರೆಯಲ್ಲಿ ಪೂಜೆ ಕೈಕಾರ್ಯ ಜವಾಬ್ದಾರಿಯನ್ನು ಪೂಜಾರಿಗಳಿಗೆ ನೀಡಿದ್ದೀರಿ. ನಮ್ಮ ಸಂಬಂಧಿಕರನ್ನು ಗೌಡಿಕೆ ಸ್ಥಾನದಿಂದ ಕೆಳಗಿಳಿಸಿದ್ದೀರಿ ಎಂದು ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಈ ಸಮಯದಲ್ಲಿ ಅದೇ ಗ್ರಾಮದ ನಿವಾಸಿಗಳಾದ ಅರಸಸಟ್ಟಿ, ಪ್ರಸನ್ನ, ಮಹಾದೇವ ಶೆಟ್ಟಿ, ಗುರುಲಿಂಗ ಗೌಡ ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಗಾಯಾಳುಗಳನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.