ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಂಡಿದ್ದ ಚಿನ್ನದ ರಥೋತ್ಸವ, ಮುಡಿ ಸೇವೆ ಸೇರಿದಂತೆ ಎಲ್ಲ ಸೇವೆಗಳು ಭಾನುವಾರದಿಂದ ಮತ್ತೆ ಆರಂಭವಾಗಿವೆ.
ಭಾನುವಾರ ಮಧ್ಯಾಹ್ನದಿಂದ ದಾಸೋಹ ಕೂಡ ಶುರುವಾಗಿದ್ದು, ಸದ್ಯಕ್ಕೆ ತಿಂಡಿ ವ್ಯವಸ್ಥೆ ಮಾತ್ರ ಇದೆ.
ಇದುವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ತೀರ್ಥ ಪ್ರಸಾದ ವಿತರಣೆಗೂ ನಿರ್ಬಂಧ ವಿಧಿಸಲಾಗಿತ್ತು.
ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ತಿಳಿಗೊಂಡಿರುವುದರಿಂದ ಜಾತ್ರೆ, ತೆಪ್ಪೋತ್ಸವದಂತಹ ಕಾರ್ಯಕ್ರಮಗಳನ್ನು ಬಿಟ್ಟು ದೇವಾಲಯದಲ್ಲಿ ನಡೆಯುವ ಉಳಿದ ಎಲ್ಲ ಸೇವೆಗಳಿಗೆ ಅವಕಾಶ ನೀಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.
ಆದೇಶ ಹೊರಬೀಳುತ್ತಿದ್ದಂತೆಯೇ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ದೇವಾಲಯದ ಒಳಾಂಗಣಕ್ಕೆ ಸೀಮಿತವಾದ ಉತ್ಸವಗಳು ಹಾಗೂ ಸೇವೆಗಳನ್ನು ಆರಂಭಿಸಿದೆ.
‘ದೇವಾಲಯದ ಒಳಭಾಗದಲ್ಲಿ ನಡೆಯುವ ದೈನಂದಿನ ಸೇವೆಗಳಾದ ರುದ್ರಾಭಿಷೇಕ, ಮಹಾಮಂಗಳಾರತಿ, ಲಾಡು ಪ್ರಸಾದ, ಹುಲಿವಾಹನ, ಬಸವವಾಹನ, ರುದ್ರಾಕ್ಷಿಮಂಟಪ ಸೇವೆ, ಚಿನ್ನದ ರಥೋತ್ಸವ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.ದಾಸೋಹವನ್ನೂ ಆರಂಭಿಸಲಾಗಿದೆ. ಮುಂದಿನ ಆದೇಶದವರೆಗೆ ಜಾತ್ರಾ ಮಹೋತ್ಸವ, ತೆಪ್ಪೋತ್ಸವ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯಧರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.