ADVERTISEMENT

ನಿವೇಶನಕ್ಕಾಗಿ ಕಚ್ಚಾಟ: ಸಾಮಾಜಿಕ ಬಹಿಷ್ಕಾರದ ಆರೋಪ

ಯಳಂದೂರು ತಾಲ್ಲೂಕಿನ ಗಣಿಗನೂರು ಗ್ರಾಮದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 13:48 IST
Last Updated 15 ನವೆಂಬರ್ 2020, 13:48 IST
ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಗುರುತಿಸಿರುವ ಜಾಗ
ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಗುರುತಿಸಿರುವ ಜಾಗ   

ಯಳಂದೂರು: ತಾಲ್ಲೂಕಿನ ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆ ಗಣಿಗನೂರು ಗ್ರಾಮದಲ್ಲಿನಾಯಕ ಸಮುದಾಯದ ಕುಟುಂಬವೊಂದಕ್ಕೆ ಜನಾಂಗದವರು ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ವಾಲ್ಮೀಕಿ ಭವನ ನಿರ್ಮಾಣಕ್ಕೆ ಗುರುತಿಸಲಾಗಿರುವ ನಿವೇಶನದವಿಚಾರವಾಗಿ ಕುಲಸ್ಥರಿಗೆ ಜಾಗ ಕೊಡಲು ನಿರಾಕರಿಸಿದ ವಿಚಾರವನ್ನು ಮುಂದಿಟ್ಟು ಅಭಿನಾಯಕ ಎಂಬುವವರಿಗೆ ಕೆಲವು ದಿನಗಳ ಹಿಂದೆ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗಿದೆ.

ತಮ್ಮ ಪೂರ್ವಜರ ಜಾಗವನ್ನು ಸಮುದಾಯದ ಯಜಮಾನರು ನೀಡದೆ, ಕುಲದಿಂದ ಹೊರಗಿಟ್ಟಿದ್ದಾರೆ ಎಂದು ಆರೋಪಿಸಿಅಭಿರಾಮ ಅವರು ಪೊಲೀಸರಿಗೆ ದೂರು ನೀಡಿ, ನಂತರ ವಾಪಸ್‌ ಪಡೆದಿದ್ದಾರೆ.

ADVERTISEMENT

ಆರೋಪವನ್ನು ನಿರಾಕರಿಸಿರುವ ಯಜಮಾನರು, ನಿವೇಶನವು ನಾಯಕ ಸಮುದಾಯದ ಹೆಸರಿನಲ್ಲಿದ್ದು ದೂರುದಾರರಿಗೆ ಸೇರಿಲ್ಲ. ಕುಟುಂಬವನ್ನು ಕುಟುಂಬದಿಂದ ಬಹಿಷ್ಕರಿಸಿಯೂ ಇಲ್ಲ ಎಂದು ಹೇಳಿದ್ದಾರೆ.

‘ವಾಲ್ಮೀಕಿ ಭವನ ನಿರ್ಮಿಸುವ ಸ್ಥಳದ ಸ್ವಲ್ಪ ಭಾಗ ನಮ್ಮ ಕುಟುಂಬಕ್ಕೆ ಸೇರಿದೆ. ಈಬಗ್ಗೆ ವಿಚಾರಿಸಲು ಮುಂದಾದಾಗ ಕುಲದವರು ₹2,500 ದಂಡ ಹಾಕಿದ್ದಾರೆ. ಈ ಬಗ್ಗೆಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ನಂತರ ವಾಪಸ್ ಪಡೆದಿದ್ದೇನೆ. ಯಳಂದೂರು ಕಟ್ಟೆಯಜಮಾನರು ಮತ್ತು ಮುಖಂಡರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ’ ಎಂದು ಅಭಿರಾಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಯಕ ಜನಾಂಗದ ಆಸ್ತಿ:ಗ್ರಾಮದಲ್ಲಿ ನಾಯಕರ ಸಮುದಾಯಕ್ಕೆ ಸೇರಿದ 100x80 ಅಳತೆಯ ನಿವೇಶನ ಇದೆ.
ಇಲ್ಲಿ ವಾಲ್ಮೀಕಿ ಭವನ ನಿರ್ಮಿಸುವ ಉದ್ದೇಶವನ್ನು ಗ್ರಾಮಸ್ಥರು ಹೊಂದಿದ್ದಾರೆ.

‘ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರೆಯಲಿದೆ. ಆದರೆ, ನಿವೇಶನ ಯಾವ ವ್ಯಕ್ತಿಯ ಹೆಸರಿನಲ್ಲೂ ನೋಂದಾಯಿಸಿಲ್ಲ. ನಮ್ಮ ಸಮಾಜ ಸೇವೆಯ ಉದ್ದೇಶವನ್ನು ಮನಗಂಡ ಸುತ್ತಮುತ್ತಲ ಜನರುಜಾಗವನ್ನು ದಾನ ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಅಭಿನಾಯಕ ಎಂಬುವವರು ಸ್ಥಳದಮಾಲೀಕತ್ವದ ವಿಚಾರವಾಗಿ ತಗಾದೆ ತೆಗೆದಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ನಿವೇಶನಕ್ಕೆ ಸಂಬಂಧಿಸಿದ ಅಸೆಸ್ಮೆಂಟ್ ಯರಿಯೂರು ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಇದೆ. ಇದರಲ್ಲಿ ದಾಖಲಾಗಿರುವ ಸ್ಥಳದ ಒಡೆತನವನ್ನು ಇದೇ 20 ರೊಳಗೆಒದಗಿಸಿ, ಸಂಬಂಧಪಟ್ಟ ಆಸ್ತಿಯನ್ನು ಬಳಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ’ ಎಂದು ಯಜಮಾನ ನಾಗರಾಜು ಮಾಹಿತಿ ನೀಡಿದರು.

ಸ್ಥಳದ ಮಾಲೀಕತ್ವದ ಬಗ್ಗೆಅಸೆಸ್ಮೆಂಟ್ ಮತ್ತು ಮೂಲ ದಾಖಲಾತಿಗಳನ್ನು ಇದೇ 20 ರೊಳಗೆ ಒದಗಿಸುವಂತೆ ಎರಡೂ ಕಡೆಯವರಿಗೂ ತಿಳಿಸಲಾಗಿದೆ. ಅಭಿರಾಮ ಅವರು ನೀಡಿರುವ ದೂರನ್ನು ನಂತರ ಗಂಭೀರವಲ್ಲದ ಪ್ರಕರಣದಡಿ ದಾಖಲಾಗಿತ್ತು. ಆದರೆ, ದೂರುದಾರರು ಕೇಸುವಾಪಸ್ ಪಡೆದಿದ್ದಾರೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮ: ಡಿ.ಸಿ ಎಚ್ಚರಿಕೆ

ಈ ಮಧ್ಯೆ,ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ಕೊಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಎಚ್ಚರಿಸಿದ್ದಾರೆ.

‘ದೌರ್ಜನ್ಯ, ಬಹಿಷ್ಕಾರ ಪ್ರಕರಣಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಲ ದಿನಗಳ ಹಿಂದೆ ನಡೆದಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗಾಗಿ ರಚಿಸಲಾಗಿರುವ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ವರ ಸಮಿತಿ: ‘ಸಾಮಾಜಿಕ ಬಹಿಷ್ಕಾರದಂತಹ ಕಾನೂನುಬಾಹಿರ ಪ್ರಕರಣಗಳು ಜರುಗದಂತೆ ಕ್ರಮ ವಹಿಸಲು ಪ್ರತಿ ತಾಲ್ಲೂಕಿನಲ್ಲೂ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನೊಳಗೊಂಡ ನಾಲ್ವರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ಬಹಿಷ್ಕಾರ ಘಟನೆಗಳ ಕುರಿತುಈ ಸಮಿತಿಗಳು ವಿಚಾರಣೆ ನಡೆಸಿ ಪ್ರಕರಣಗಳ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ವರದಿ ಮಾಡುವಂತೆ ಸೂಚಿಸಲಾಗಿದೆ’ ಎಂದು ಡಾ. ಎಂ.ಆರ್.ರವಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.