ADVERTISEMENT

ಅಂಬೇಡ್ಕರ್, ಬುದ್ಧನಿಗೆ ಅಪಮಾನ: ನೈಜ ಆರೋಪಿಗಳನ್ನು ಬಂಧಿಸಿ: ಬೃಹತ್ ಪ್ರತಿಭಟನೆ

ನಾಯಕ ಸಮುದಾಯ ಹಾಗೂ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:55 IST
Last Updated 16 ನವೆಂಬರ್ 2025, 4:55 IST
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನ ಪುರ ಗ್ರಾಮದಲ್ಲಿ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಹಾಗೂ ಬುದ್ಧನ ವಿಗ್ರಹ ಧ್ವಂಸಗೊಳಿಸಿ ಪ್ಲೆಕ್ಸ್, ಭಾವಚಿತ್ರ ಹರಿದುಹಾಕಿರುವ ನೈಜ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನ ಪುರ ಗ್ರಾಮದಲ್ಲಿ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಹಾಗೂ ಬುದ್ಧನ ವಿಗ್ರಹ ಧ್ವಂಸಗೊಳಿಸಿ ಪ್ಲೆಕ್ಸ್, ಭಾವಚಿತ್ರ ಹರಿದುಹಾಕಿರುವ ನೈಜ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು   

ಚಾಮರಾಜನಗರ: ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಹಾಗೂ ಬುದ್ಧನ ವಿಗ್ರಹ ಧ್ವಂಸಗೊಳಿಸಿ ಪ್ಲೆಕ್ಸ್, ಭಾವಚಿತ್ರ ಹರಿದುಹಾಕಿರುವ ನೈಜ ಅಪರಾಧಿಗಳನ್ನು ಬಂಧಿಸುವ ಬದಲು ನಿರಪರಾಧಿಗಳ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಿರುವುದು ಖಂಡನೀಯ ಎಂದುಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಮಾರಿಗುಡಿ ಮುಂಭಾಗದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತ ತಲುಪಿ ರಸ್ತೆ ತಡೆ ನಡೆಸಿ ಪೋಲಿಸ್ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿತು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ಧನ ಬಗ್ಗೆ ನಾಯಕ ಸಮುದಾಯಕ್ಕೆ ಅಪಾರ ಗೌರವ ಹಾಗೂ ಪ್ರೀತಿ ಇದ್ದು ಮಹನೀಯರ ಮೂರ್ತಿ ಹಾಗೂ ಭಾವಚಿತ್ರ ವಿರೂಪಗೊಳಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆದರೆ, ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ಮಾಡಿಲ್ಲ, ನಿರಪರಾಧಿಗಳನ್ನು ವಿಚಾರಣೆಗೆ ಕರೆದು ದೈಹಿಕ ಹಲ್ಲೆ ನಡೆಸಿದ್ದಾರೆ. ಅಮಾಯಕರ ಮೇಲೆ ದೌರ್ಜನ್ಯ ಎಸಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು.

ADVERTISEMENT

ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಿರುವುದರಿಂದ ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕು. ಎಸ್.ಐ.ಟಿ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಹೊಂಗನೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕೂಸ ನಾಯಕನ ಸಾವಿಗೆ ಕಾರಣರಾದ ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಬಂಧಿಸದಿರುವುದು ಖಂಡನೀಯ. ಮೂವರ ಮಾನಸಿಕ ಹಿಂಸೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟರೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸದಿರುವುದು ಬೇಸರದ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಬದನಗುಪ್ಪೆ ಗ್ರಾಮದಲ್ಲಿ ನಾಮಫಲಕ ಅಳವಡಿಕೆ ವಿಚಾರದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ತನಿಖೆ ನಡೆಸಿ ಆದೇಶ ನೀಡಿದ್ದರೂ ಅನ್ಯ ಜಿಲ್ಲೆಯ ವ್ಯಕ್ತಿಯೊಬ್ಬ ನಾಯಕ ಸಮುದಾಯದ ಮೇಲೆ ಆರೋಪ ಮಾಡಿ ಹೋರಾಟ ನಡೆಸುವ ಮೂಲಕ ಸಮುದಾಯಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ  ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಪು.ಶ್ರೀನಿವಾಸನಾಯಕ
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷ  ಹೆಚ್.ವಿ.ಚಂದ್ರು,  ಯಳಂದೂರು ಉಮಾಶಂಕರ್, ಜಯಸುಂದರ್ ಮಾತನಾಡಿದರು.

ನಗರಸಭಾ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಮುಖಂಡರಾದ ಸೋಮನಾಯಕ, ಯ.ರಾಜುನಾಯಕ, ಕಪಿನಿ ನಾಯಕ, ಕೃಷ್ಣನಾಯಕ, ಚೆಂಗುಮಣಿ, ಶಿವು ವಿರಾಟ್, ಬುಲೆಟ್ ಚಂದ್ರು, ರಾಜೇಶ್, ನಾಗೇಂದ್ರ, ಚಂದ್ರಶೇಖರ್, ಸೋಮೇಶ್, ರಾಮನಾಯಕ, ಚಾ.ಸಿ.ಸೋಮನಾಯಕ, ನಾಯಕ ಜನಾಂಗದ ಯಜಮಾನರು, ಕುಲಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.