ಸಂಗ್ರಹ ಚಿತ್ತ
ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಂತು ಕಾಡಾನೆ ಉಪಟಳ ನೀಡುತ್ತಿದ್ದು, ವಾಹನ ಸವಾರರು ಭೀತಿಗೊಳಗಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆಯೂ ಕಾಡಾನೆ ರಸ್ತೆಯ ಮಧ್ಯೆ ಕೆಲಕಾಲ ಅಡ್ಡಲಾಗಿ ನಿಂತು ವಾಹನಗಳ ಸಮೀಪವೇ ಬಂದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿತ್ತು. ಆನೆ ದಾಳಿ ಮಾಡಬಹುದು ಎಂಬ ಭಯದಲ್ಲಿ ವಾಹನದೊಳಗಿದ್ದವರು ಚೀರಿಕೊಳ್ಳುವ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ.
ತಾಲ್ಲೂಕಿನಿಂದ ಕೇರಳ, ತಮಿಳುನಾಡು ರಾಜ್ಯಗಳಿಗೆ ಪ್ರತಿನಿತ್ಯ ತರಕಾರಿ, ಹಣ್ಣು ಸಾಗಿಸುವ ವಾಹನಗಳನ್ನು ಹೆದ್ದಾರಿ ಮಧ್ಯೆ ಅಡ್ಡಗಟ್ಟುತ್ತಿರುವ ಆನೆ ಆಹಾರ ಪದಾರ್ಥಗಳನ್ನು ಸೇವಿಸುತ್ತಿದೆ. ಕಾಡಾನೆ ಉಪಟಳ ತಡೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸವಾರರು ಒತ್ತಾಯಿಸಿದ್ದಾರೆ.
ಈಚೆಗಷ್ಟೆ ತಮಿಳುನಾಡು ಗಡಿಯ ಆಸನೂರು ಬಳಿ ಕಬ್ಬು ಸಾಗಿಸುತ್ತಿದ್ದ ಲಾರಿಯ ಮೇಲೆ ದಾಳಿ ಮಾಡಿದ ಕಾಡಾನೆ ಗಾಜು ಪುಡಿ ಮಾಡಿತ್ತು.
ಕ್ರಮ: ಆಹಾರ ಪದಾರ್ಥ ಸಾಗಿಸುವ ವಾಹನಗಳನ್ನು ಕಾಡಾನೆ ಅಡ್ಡಗಟ್ಟುತ್ತಿದ್ದು ಅರಣ್ಯದೊಳಗೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್ಒ ಪ್ರಭಾಕರನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.