ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ವಾಹನವೊಂದರ (ಜಿಪ್ಸಿ) ಮೇಲೆ ಒಂಟಿ ಸಲಗ ದಾಳಿ ಮಾಡಲು ಯತ್ನಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳವಾರ ಸಂಜೆ ಕಾಡಿನ ಕಚ್ಚಾ ರಸ್ತೆಯಲ್ಲಿ ಜಿಪ್ಸಿ ಸಾಗುತ್ತಿದ್ದಾಗ ಕಾಡಾನೆಯೊಂದು ಅಡ್ಡಬಂದಿದೆ. ಆನೆಯು ಘೀಳಿಡುತ್ತಾ ಜಿಪ್ಸಿ ಮೇಲೆ ದಾಳಿ ಮಾಡಲು ವಾಹನದತ್ತ ಬಂದಿದೆ. ಧೃತಿಗೆಡದ ಚಾಲಕ ವಾಹನವನ್ನು ವೇಗವಾಗಿ ಹಿಮ್ಮುಖವಾಗಿ ಚಲಿಸಿದ್ದಾರೆ. 300 ಮೀಟರ್ಗೂ ಹೆಚ್ಚು ದೂರ ಜಿಪ್ಸಿಯನ್ನು ಅಟ್ಟಿಸಿಕೊಂಡು ಬಂದ ಆನೆ ನಂತರ ವಾಪಸ್ ಹೋಗಿದೆ.
ಜಿಪ್ಸಿಯಲ್ಲಿ ಹಿಂಭಾಗದಲ್ಲಿದ್ದವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಬಂಡೀಪುರದಲ್ಲಿ ಈ ಘಟನೆ ನಡೆದಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.ಮಹದೇವ್ ಎಂಬುವವರು ಜಿಪ್ಸಿಯನ್ನು ಚಾಲನೆ ಮಾಡುತ್ತಿದ್ದರು ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆ ಹಾಗೂ ಧೈರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.