ಯಳಂದೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ತಂಡ ಕುಂದು ಕೊರತೆ ಸಭೆ ನಡೆಸಿತು. ನಂತರ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಜಿ.ಎಸ್. ಗಜೇಂದ್ರ ಪ್ರಸಾದ್ ಮಾತನಾಡಿ, ‘ಅಧಿಕಾರಿಗಳು ಸಾರ್ವಜನಿಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸಮಸ್ಯೆ ಕಂಡುಬಂದರೆ ತಕ್ಷಣ ಪರಿಹರಿಸುವ ಬಗ್ಗೆ ಕಾಳಜಿ ಹೊಂದಿರಬೇಕು. ದಲ್ಲಾಳಿಗಳ ಮೂಲಕ ಜನರು ಕೆಲಸ ಮಾಡಿಸುವಂತ ವಾತಾವರಣ ಕಚೇರಿಗಳಲ್ಲಿ ಇರಬಾರದು. ವಿಳಂಬಕ್ಕೆ ಅವಕಾಶ ಇಲ್ಲದಂತೆ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.
‘ಹೊನ್ನೂರು ಗ್ರಾಮ ಪಂಚಾಯತಿಗೆ ಆರ್ಟಿಐ ಮೂಲಕ ಅರ್ಜಿ ನೀಡಿದ್ದು. ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಮಾಹಿತಿ ನೀಡಲು ವಿಳಂಬ ಮಾಡುತ್ತಿದ್ದಾರೆ’ ಎಂದು ಮರಿಸ್ವಾಮಿ ದೂರಿದರು. ವೈ.ಎಸ್. ನಾರಾಯಣ್, ಹೊನ್ನೂರು ಪುಟ್ಟಸ್ವಾಮಿ ಹಾಗೂ ವೈ.ಎನ್. ಪ್ರಕಾಶ್ ಅವರು ವಿವಿಧ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿದರು.
ಲೋಕಾಯುಕ್ತ ಎಸ್ಐ ಸಿ.ಆರ್. ಶಶಿಕುಮಾರ್, ಲೋಹಿತ್ ಕುಮಾರ್, ಕೃಷಿ ಅಧಿಕಾರಿ ವೈ.ಎನ್.ಅಮೃತೇಶ್, ಚೆಸ್ಕಾಂ ಅಧಿಕಾರಿ ಎನ್.ಲಿಂಗರಾಜು, ಎಂಜಿನಿಯರ್ ಸಂತೋಷ್, ಅಬಕಾರಿ ಅಧಿಕಾರಿ ಮಹದೇವ್, ತಾಲ್ಲೂಕು ಆರೋಗ್ಯ ಅಧಿಕಾರಿ ತನುಜಾ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.