ಚಾಮರಾಜನಗರ: ‘ರೋಗಿಗಳ ಆರೋಗ್ಯ ಹಾಗೂ ಮನಃಸ್ಥಿತಿ ಅರಿತು ಔಷಧ ಜೊತೆಗೆ ಉತ್ತಮ ಸೇವೆಯಿಂದ ಕಾಯಿಲೆ ಗುಣಪಡಿಸುವಲ್ಲಿ ಶುಶ್ರೂಷಕರ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಗುರುವಾರ ತಿಳಿಸಿದರು.
ನಗರದ ಹೊರವಲಯದ ಯಡಬೆಟ್ಟದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸಿಮ್ಸ್ ಕಾಲೇಜ್ ಆಫ್ನರ್ಸಿಂಗ್ನ ಎರಡನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ದೀಪ ಬೆಳಗುವಿಕೆ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ವೈದ್ಯರಿಗಿಂತ ದಾದಿಯರ ಒಡನಾಟವೇ ಹೆಚ್ಚಿರುತ್ತದೆ. ಮಕ್ಕಳು, ಹಿರಿಯರು ಮತ್ತು ಕಿರಿಯ ರೋಗಿಗಳ ಮಾತು, ನಡವಳಿಕೆಗಳನ್ನು ಸಹಿಸಿಕೊಳ್ಳುವ ಮನಸ್ಥಿತಿ ಶುಶ್ರೂಷಕರಲ್ಲಿ ಇರಬೇಕು. ಸೇವೆಯಲ್ಲಿ ಜೀವಗಳನ್ನು ಉಳಿಸುವ ಮಹತ್ವದ ಕೆಲಸವಾಗಲಿ’ ಎಂದು ಹೇಳಿದರು.
‘ನರ್ಸಿಂಗ್ ಸೇವೆಗೆ ನಿಗದಿತ ಸಮಯ ಇರುವುದಿಲ್ಲ. ಎಲ್ಲ ಸಮಯದಲ್ಲೂ ಮಾಡಬೇಕಾಗುತ್ತದೆ. ಉತ್ತಮ ಸೇವೆಯಿಂದ ಒಳ್ಳೆಯ ಹೆಸರು ಪಡೆಯಬಹುದು’ ಎಂದು ಗಾಯಿತ್ರಿ ಅವರು ಸಲಹೆ ಮಾಡಿದರು.
ಇದೇ ವೇಳೆ ನರ್ಸಿಂಗ್ ವಿದ್ಯಾರ್ಥಿಗಳು ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಮೂಲಕ ಗಮನಸೆಳೆಸದರು.
ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಜಿ.ಎಂ.ಸಂಜೀವ್, ಮೈಸೂರಿನ ಎಂ.ಎಂ.ಸಿ.ಆರ್.ಐ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎ.ಬಿ.ಪುಷ್ಪಲತಾ, ಜಿಲ್ಲಾ ಸರ್ಜನ್ ಡಾ. ಎಚ್.ಎಸ್. ಕೃಷ್ಣಪ್ರಸಾದ್, ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ವಿ. ಪಾಟೀಲ, ಬೋಧನಾ ಆಸ್ಪತ್ರೆಯ ಶುಶ್ರೂಷಕ ಸೂಪರಿಂಟೆಂಡೆಂಟ್ ಎನ್.ಗೀತಾ, ಸಿಮ್ಸ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ನಮ್ರತಾ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.