ಚಾಮರಾಜನಗರ: ಜಿಲ್ಲೆಯ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಗತ್ಯ ದಾಖಲಾತಿಗಳ ಅಲಭ್ಯತೆ ಹಾಗೂ ತಾಂತ್ರಿಕ ತೊಡಕುಗಳ ಕಾರಣದಿಂದ ಪೋಷಕರು ಮಕ್ಕಳ ಆಧಾರ್ ಕಾರ್ಡ್ ಮಾಡಿಸಲಾಗದೆ ಕೈಚೆಲ್ಲಿ ಕುಳಿತಿದ್ದಾರೆ.
ಆಧಾರ್ ಕಾರ್ಡ್ ಇಲ್ಲದ ಪರಿಣಾಮ ಮಕ್ಕಳ ಹೆಸರನ್ನು ಪಡಿತರ ಕಾರ್ಡ್ಗೆ ಸೇರಿಸಲು ಸಾಧ್ಯವಾಗದೆ ‘ಅನ್ನ ಭಾಗ್ಯ’ ಯೋಜನೆಯಿಂದ ನಮ್ಮ ಮಕ್ಕಳು ವಂಚಿತರಾಗಬೇಕಾಗಿದೆ. ಆಧಾರ್ ಕಾರ್ಡ್ ಮಾಡಿಸಲು ಸರ್ಕಾರಿ ಕಚೇರಿಗಳಿಗೆ ಅಲೆದು ಸಾಕಾಗಿದೆ ಎಂದು ಪೋಷಕರು ಅಲವತ್ತುಕೊಳ್ಳುತ್ತಿದ್ದಾರೆ.
ಸಮಸ್ಯೆ ಏನು?: ಆಧಾರ್ ಕಾರ್ಡ್ ಮಾಡಿಸಲು ಮಗುವಿನ ಜನನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆದರೆ, ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗಕ್ಕೆ ಸೇರಿರುವ ಬುಡಕಟ್ಟು ಸಮುದಾಯದ ಬಹಳಷ್ಟು ಪೋಷಕರ ಬಳಿ ಮಕ್ಕಳ ಜನನ ಪ್ರಮಾಣ ಪತ್ರವೇ ಇಲ್ಲ.
ಹಾಡಿಗಳಲ್ಲಿ ವಾಸವಿರುವ ಬಹುತೇಕರು ಅನಕ್ಷರಸ್ಥರಾಗಿರುವ ಕಾರಣ ಜನನ ಪ್ರಮಾಣ ಪತ್ರ ಮಾಡಿಸಿಕೊಂಡಿಲ್ಲ. ಎಲ್ಲಿ ದಾಖಲೆ ಪಡೆಯಬೇಕು ಎಂಬ ಕನಿಷ್ಠ ಮಾಹಿತಿಯೂ ಅವರಿಗೆ ಇಲ್ಲ. ಈಗ ಮಕ್ಕಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ.
ಆಧಾರ್ ಕಾರ್ಡ್ ಮಾಡಿಸಲು ಹೋದರೆ ಜನನ ಪ್ರಮಾಣ ಪತ್ರ ಕೇಳುತ್ತಾರೆ, ಜನನ ಪ್ರಮಾಣ ಪತ್ರ ಮಾಡಿಸಲು ಹೋದರೆ ಪೂರಕ ದಾಖಲೆ ಕೇಳುತ್ತಾರೆ. ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಿಗೆ ಸುತ್ತಿದರೂ ಪ್ರಯೋಜನವಾಗಿಲ್ಲ. ಅಂದು ದುಡಿದು ಅಂದು ತಿನ್ನಬೇಕಾದ ಪರಿಸ್ಥಿತಿಯಲ್ಲಿ ಕಚೇರಿಗಳಿಗೆ ಅಲೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಮೆದಗನಣೆಯ ಮಾದೇವಿ.
ಪಡಿತರ ಚೀಟಿಯಲ್ಲಿ ಮಗಳ ಹೆಸರು ಸೇರ್ಪಡೆಯಾಗಿದ್ದರೆ ತಿಂಗಳಿಗೆ 10 ಕೆ.ಜಿ ಅಕ್ಕಿ ಸಿಗುತ್ತಿತ್ತು. ಆಧಾರ್ ಕಾರ್ಡ್ ಇಲ್ಲದೆ 8 ವರ್ಷಗಳಿಂದ ಮಗಳ ಪಾಲಿಗೆ ಬರಬೇಕಿದ್ದ ಅಕ್ಕಿಯಿಂದ ವಂಚಿತರಾಗಿದ್ದೇವೆ ಎಂದು ನೋವಿನಿಂದ ನುಡಿಯುತ್ತಾರೆ ಮಾದೇವಿ.
ಮಗಳು ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕಲಿಯುತ್ತಿದ್ದು, ಅಲ್ಲಿ 5ನೇ ತರಗತಿವರೆಗೆ ಮಾತ್ರ ಶಿಕ್ಷಣ ದೊರೆಯುತ್ತದೆ. ಮುಂದೆ ಅವಳನ್ನು ಖಾಸಗಿ ಶಾಲೆಯಲ್ಲಿ ಓದಿಸುವಷ್ಟು ಕುಟುಂಬ ಆರ್ಥಿಕವಾಗಿ ಶಕ್ತವಾಗಿಲ್ಲ. ಹಾಗಾಗಿ, 6ನೇ ತರಗತಿಗೆ ನವೋದಯ ಶಾಲೆಗೆ ಸೇರಿಸುವ ಆಸೆ ಇದೆ. ಆಧಾರ್ ಕಾರ್ಡ್ ಇಲ್ಲದೆ ನವೋದಯ ಶಾಲೆಯ ಪ್ರವೇಶ ಪರೀಕ್ಷೆ ಬರೆಯಲು ಸಾಧ್ಯವಿಲ್ಲದಿರುವುದರಿಂದ ಮಗಳ ಭವಿಷ್ಯದ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಪೋಷಕರೊಬ್ಬರು.
ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಓದುತ್ತಿರುವ 200ಕ್ಕೂ ಹೆಚ್ಚು ಮಕ್ಕಳ ಬಳಿ ಆಧಾರ್ ಕಾರ್ಡ್ ಇಲ್ಲ ಎಂಬ ಮಾಹಿತಿ ಇದೆ. ಮಕ್ಕಳಿಗೆ 10 ವರ್ಷ ತುಂಬುತ್ತಾ ಬಂದರೂ ಆಧಾರ್ ಕಾರ್ಡ್ ನೀಡಲಾಗದ ವ್ಯವಸ್ಥೆಯ ಬಗ್ಗೆ ಬೇಸರವಿದೆ. ಆದಿವಾಸಿಗಳ ಬಗ್ಗೆ ಆಳುವ ಸರ್ಕಾರಗಳು ಕಾಳಜಿ ತೋರದಿರುವುದು ಖಂಡನೀಯ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆಶ್ರಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಆಧಾರ್ ಕಾರ್ಡ್ ಇಲ್ಲದವರನ್ನು ಗುರುತಿಸಿ ದಾಖಲೆ ನೀಡಬೇಕು ಎಂದು ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಗಾಣಿಗಮಂಗಲ ಆಗ್ರಹಿಸುತ್ತಾರೆ.
ಏ.11ರಂದು ಆಶ್ರಮ ಶಾಲೆಯ ಶಿಕ್ಷಕರ ಸಭೆ ಕರೆದಿದ್ದು ಆಧಾರ್ ಕಾರ್ಡ್ ಇಲ್ಲದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ಮಾಡಿಕೊಡಲು ಕ್ರಮ ತೆಗೆದುಕೊಳ್ಳಲಾಗುವುದುಬಿಂಧ್ಯಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
‘ಶಿಕ್ಷಣ ವಂಚಿತ ಸಮುದಾಯ’
ದಾಖಲಾತಿಗಳು ಇಲ್ಲ ಎಂಬ ಕಾರಣಕ್ಕೆ ಆದಿವಾಸಿಗಳ ಮಕ್ಕಳಿಗೆ ಆಧಾರ್ ಕಾರ್ಡ್ ನಿರಾಕರಿಸುವುದು ಸರಿಯಲ್ಲ. ಇದರಿಂದ ಆದಿವಾಸಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಬುಡಕಟ್ಟು ಸಮುದಾಯ ಇಂದಿಗೂ ಕಾಡಂಚಿನ ಹಾಡಿಗಳಲ್ಲಿ ಮೂಲಸೌಕರ್ಯಗಳು ಇಲ್ಲದೆ ಬದುಕುತ್ತಿವೆ. ನಗರವಾಸಿಗಳಂತೆ ದಾಖಲಾತಿಗಳನ್ನು ಇಟ್ಟುಕೊಂಡಿರುವುದಿಲ್ಲ. ಕಾನೂನು ತೊಡಕು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಆಧಾರ್ ಕಾರ್ಡ್ ನೀಡಬೇಕಿರುವುದು ಅಧಿಕಾರಿಗಳ ಜವಾಬ್ದಾರಿ. ನಾಗೇಂದ್ರ ಗಾಣಿಗಮಂಗಲ ಆದಿವಾಸಿ ಹಿತರಕ್ಷಣ ಸಮಿತಿ ಅಧ್ಯಕ್ಷ
ಜಿಲ್ಲೆಯಲ್ಲಿರುವ ಆಶ್ರಮ ಶಾಲೆಗಳು ತಾಲ್ಲೂಕು;ಶಾಲೆಗಳು
ಹನೂರು;8
ಚಾಮರಾಜನಗರ;6
ಗುಂಡ್ಲುಪೇಟೆ;3
ಕೊಳ್ಳೇಗಾಲ;2
ಯಳಂದೂರು;1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.