ADVERTISEMENT

ಚಾಮರಾಜನಗರ | ಪಿಯು ಕಾಲೇಜುಗಳಲ್ಲಿ ದಾಖಲಾತಿ ಕುಸಿತ!

ಎಸ್‌ಎಸ್ಎಲ್‌ಸಿ ಫಲಿತಾಂಶ ಕುಸಿತ, ಹೊರ ಜಿಲ್ಲೆಗಳ ಕಾಲೇಜುಗಳಲ್ಲಿ ದಾಖಲಾತಿ ಒಲವು ಕಾರಣ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 6:29 IST
Last Updated 18 ಜೂನ್ 2025, 6:29 IST
ಯಳಂದೂರು ಪಟ್ಟಣದ ಜೆಎಸ್ಎಸ್ ಮಹಿಳಾ ಪಿಯು ಕಾಲೇಜು ವಿದ್ಯಾರ್ಥಿನಿಯರನ್ನು ಕಾಲೇಜು ಆರಂಭೋತ್ಸವದಲ್ಲಿ ಸ್ವಾಗತಿಸುತ್ತಿರುವ ದೃಶ್ಯ
ಯಳಂದೂರು ಪಟ್ಟಣದ ಜೆಎಸ್ಎಸ್ ಮಹಿಳಾ ಪಿಯು ಕಾಲೇಜು ವಿದ್ಯಾರ್ಥಿನಿಯರನ್ನು ಕಾಲೇಜು ಆರಂಭೋತ್ಸವದಲ್ಲಿ ಸ್ವಾಗತಿಸುತ್ತಿರುವ ದೃಶ್ಯ    

ಚಾಮರಾಜನಗರ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀವ್ರ ಕುಸಿತ, ಹೊರ ಜಿಲ್ಲೆಗಳ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳ ಒಲವು ಹಾಗೂ ಹೊಸ ಕೋರ್ಸ್‌ಗಳತ್ತ ಆಕರ್ಷಣೆಯ ಪರಿಣಾಮ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ ಪದವಿಪೂರ್ವ ಕಾಲೇಜುಗಳಿಗೆ ನಿರೀಕ್ಷಿತ ಪ್ರಮಾಣದ ದಾಖಲಾತಿ ನಡೆದಿಲ್ಲ.

ಜೂನ್ 2ರಿಂದಲೇ ಪಿಯು ತರಗತಿಗಳು ಆರಂಭವಾಗಿದ್ದರೂ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರದಿರುವುದು ಕಂಡುಬಂದಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2025–26ನೇ ಸಾಲಿನಲ್ಲಿ (ಜೂನ್ 5ರವರೆಗೆ) ಜಿಲ್ಲೆಯಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಲು 4,178 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ (ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿ) 1,551, ಅನುದಾನಿತ ಕಾಲೇಜುಗಳಲ್ಲಿ 748 ಹಾಗೂ ಖಾಸಗಿ ಕಾಲೇಜುಗಳಲ್ಲಿ 1,879 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ.

ADVERTISEMENT

2024–25ನೇ ಸಾಲಿನಲ್ಲಿ 7,084 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2,906 ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗಿದೆ.

ವಿಭಾಗವಾರು ದಾಖಲಾತಿ ನೋಡಿದರೆ ಸರ್ಕಾರಿ ಕಾಲೇಜುಗಳ ಕಲಾ ವಿಭಾಗಕ್ಕೆ 499, ಅನುದಾನಿತ ಕಾಲೇಜುಗಳಲ್ಲಿ 180, ಖಾಸಗಿ ಕಾಲೇಜುಗಳಲ್ಲಿ 200 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಸರ್ಕಾರಿ ಕಾಲೇಜುಗಳ ವಾಣಿಜ್ಯ ವಿಭಾಗಕ್ಕೆ 537, ಅನುದಾನಿತ ಕಾಲೇಜುಗಳಲ್ಲಿ 290, ಖಾಸಗಿ ಕಾಲೇಜುಗಳಲ್ಲಿ 731 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗಕ್ಕೆ ಸರ್ಕಾರಿ ಕಾಲೇಜುಗಳಲ್ಲಿ 515, ಅನುದಾನಿತ ಕಾಲೇಜುಗಳಲ್ಲಿ 278, ಖಾಸಗಿ ಕಾಲೇಜುಗಳಿಗೆ 933 ವಿದ್ಯಾರ್ಥಿಗಳು ಸೇರಿದ್ದಾರೆ.

ದಾಖಲಾತಿ ಕುಸಿಯಲು ಕಾರಣ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ 60.86 ಫಲಿತಾಂಶದೊಂದಿಗೆ ಜಿಲ್ಲೆ ರಾಜ್ಯದಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷ ಶೇ 73.85ರಷ್ಟು ಫಲಿತಾಂಶದೊಂದಿಗೆ 24ನೇ ಸ್ಥಾನದಲ್ಲಿತ್ತು. ಶೇ 12.99ರಷ್ಟು ಫಲಿತಾಂಶ ಕುಸಿತ ದಾಖಲಾತಿ ಮೇಲೆ ಪರಿಣಾಮ ಬೀರಿದೆ. 

ಹೊರ ಜಿಲ್ಲೆಗಳ ಮೇಲೆ ವ್ಯಾಮೋಹ: ಪೋಷಕರು ಮಕ್ಕಳನ್ನು ಹೊರ ಜಿಲ್ಲೆಗಳಲ್ಲಿರುವ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ವಸತಿಯುತ ಕಾಲೇಜುಗಳಲ್ಲಿ ಮಕ್ಕಳನ್ನು ಓದಿಸಲು ಪೋಷಕರು ಉತ್ಸಾಹ ತೋರುತ್ತಿದ್ದಾರೆ ಎಂದು ಪಿಯು ಉಪನ್ಯಾಸಕರೊಬ್ಬರು ತಿಳಿಸಿದರು.

ಆದರ್ಶ ಶಾಲೆಗಳು ಮೇಲ್ದರ್ಜೆಗೆ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಿಲ್ಲೆಯಲ್ಲಿರುವ ಆದರ್ಶ ಶಾಲೆಗಳಲ್ಲಿ ಪಿಯುಸಿವರೆಗೂ ಶಿಕ್ಷಣ ವಿಸ್ತರಿಸಲಾಗಿದ್ದು ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಆದರ್ಶ ಶಾಲೆಗಳಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣ ದಾಖಲಾತಿ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಖಾಸಗಿ ಪಿಯು ಕಾಲೇಜುಗಳಲ್ಲೂ ದಾಖಲಾತಿ ಇಳಿಕೆ ಮುಚ್ಚುವ ಭೀತಿ ಎದುರಿಸುತ್ತಿರುವ ಹಲವು ಕಾಲೇಜುಗಳು   ಆದರ್ಶ ಶಾಲೆಗಳಲ್ಲಿ ಪಿಯು ಪ್ರವೇಶಕ್ಕೆ ಉತ್ಸಾಹ

ಯಳಂದೂರು: ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಪಟ್ಟಣದಲ್ಲಿ ಸರ್ಕಾರಿ ಮತ್ತು ಜೆಎಸ್ಎಸ್ ಮಹಿಳಾ ಕಾಲೇಜು ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿವೆ. ಗುಂಬಳ್ಳಿ ಗ್ರಾಮದ ವಿಜಿಕೆಕೆ ಕಾಲೇಜು ಮುಚ್ಚುವ ಹಂತ ಮುಟ್ಟಿದೆ. ಸರ್ಕಾರಿ ಕಾಲೇಜಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ 200ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದರು. ಕಲಾ ವಾಣಿಜ್ಯ ವಿಜ್ಞಾನ ವಿಷಯಗಳಿಗೆ ಹೆಚ್ಚು  ಬೇಡಿಕೆ ಇರುತ್ತಿತ್ತು. ಈ ವರ್ಷ 50 ಮಕ್ಕಳು ಮಾತ್ರ ದಾಖಲಾಗಿದ್ದಾರೆ ಜೆಎಸ್ಎಸ್ ಮಹಿಳಾ ಕಾಲೇಜಿಗೆ ಪ್ರತಿ ವರ್ಷ 220 ವಿದ್ಯಾರ್ಥಿಗಳ ನೋಂದಣಿ ಇರುತ್ತಿತ್ತು. ಪ್ರಸಕ್ತ ಸಾಲಿನಲ್ಲಿ 108 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದಾರೆ ಗುಂಬಳ್ಳಿ ವಿಜಿಕೆಕೆ ಕಾಲೇಜು ಶೂನ್ಯ ದಾಖಲಾತಿಯಾಗಿದ್ದು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಉಪನ್ಯಾಸಕರು ಪ್ರತಿ ವರ್ಷ 200ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಕಲಾ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ದಾಖಲಾಗುತ್ತಿದ್ದರು. ಕಳೆದ 2 ವರ್ಷಗಳಿಂದ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಶೇ 50ಕ್ಕೆ ಕುಸಿದಿದೆ. ಇದರ ಪರಿಣಾಮ ಉಪನ್ಯಾಸಕರು ಮತ್ತು ಸಿಬ್ಬಂದಿಗಳ ಮೇಲೆ ಆಗಲಿದೆ ಎಂದು ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಹೇಳುತ್ತಾರೆ. ಚೇತರಿಕೆ ಸಾಧ್ಯತೆ: 10ನೇ ತರಗತಿ ಅನುತೀರ್ಣಗೊಂಡವರಿಗೆ 2ನೇ ಮತ್ತು 3ನೇ ಪರೀಕ್ಷೆಗಳು ನಡೆಯಲಿದ್ದು ಅದರಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಪಿಯುಸಿ ಪ್ರವೇಶಾತಿ ಪಡೆಯಲಿದ್ದಾರೆ. ಪ್ರವೇಶಾತಿಗೆ ಇನ್ನೂ ಕಾಲಾವಕಾಶ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಉಪನ್ಯಾಸಕ ಸ್ಟೀವನ್. ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಪಿಯು ತರಗತಿಗಳು ಆರಂಭಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿಸಿಎಂಬಿ ಪಿಸಿಎಂಸಿಎಸ್ ಇಬಿಎಸಿಎಸ್ ವಿಭಾಗಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಪ್ರಾಂಶುಪಾಲ ತಿಮ್ಮರಾಜು ತಿಳಿಸಿದರು. ಮುಚ್ಚಿದ ಪಿಯು ಕಾಲೇಜು: 30 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಕಾಲೇಜನ್ನು ವಿದ್ಯಾರ್ಥಿಗಳ ಕೊರತೆಯಿಂದ ಈ ವರ್ಷದಿಂದ ಸ್ಥಗಿತಗೊಳಿಸಲಾಗಿದೆ. ಕನಿಷ್ಠ 150 ಮಕ್ಕಳನ್ನು ನೋಂದಣಿ ಮಾಡಿ ಕಾಲೇಜು ನಡೆಸುವುದು ಕಷ್ಟ. ಹಾಗಾಗಿ 2025-26ನೇ ಸಾಲಿನಿಂದ ಕಲಾ ವಿಭಾಗದ ತರಗತಿಗಳನ್ನು ಮುಚ್ಚಬೇಕಿದೆ ಎಂದು ಗುಂಬಳ್ಳಿ ವಿವೇಕಾನಂದ ಗಿರಿಜನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ನಂದಿನಿ ಬೇಸರ ವ್ಯಕ್ತಪಡಿಸಿದರು.

ದಾಖಲಾತಿ ಪ್ರಮಾಣ ಸ್ವಲ್ಪ ಇಳಿಕೆ’ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಥಮ ಪಿಯುಸಿಗೆ ದಾಖಲಾತಿ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿರುವುದು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಹಾಗೂ 3ರ ಫಲಿತಾಂಶ ಬಂದ ನಂತರ ದಾಖಲಾತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. –ಪುಟ್ಟಗೌರಮ್ಮ ಡಿಡಿಪಿಯು 

2025–26ನೇ ಸಾಲಿನ ದಾಖಲಾತಿ (ಗ್ರಾಫಿಕ್ಸ್‌) ಪ್ರಥಮ ಪಿಯುಸಿಗೆ ದಾಖಲಾತಿ;4178 ದ್ವಿತೀಯ ಪಿಯುಸಿಗೆ ದಾಖಲಾತಿ;4682 ಪ್ರಥಮ ದ್ವಿತೀಯ ಪಿಯು ದಾಖಲಾತಿ;8860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.