ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಚರಂಡಿ ಸ್ಲ್ಯಾಬ್ ಕುಸಿತ ಸ್ಥಳ ಹಾಗೂ ಅಪಘಾತ ವಲಯಗಳಿಗೆ ಪುರಸಭೆ ನೂತನ ಅಧ್ಯಕ್ಷ ಜಿ.ಎಸ್.ಮಧುಸೂಧನ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದುರಸ್ತಿ ಪಡಿಸುವಂತೆ ಸೂಚಿಸಿದರು.
ಗುಂಡ್ಲುಪೇಟೆ ಪಟ್ಟಣದ ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-766 ಹಾಗೂ ಕೇರಳ ರಸ್ತೆ ಅಪಘಾತ ವಲಯದ ರಸ್ತೆಗಳಿಗೆ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಸ್ಲ್ಯಾಬ್ ಕುಸಿತವಾಗಿರುವ ಸ್ಥಳಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಪಟ್ಟಣದ ಸುರಭಿ ಹೋಟೆಲ್ನಿಂದ ಮಹದೇವಪ್ರಸಾದ್ ನಗರದವರೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಪಾದಚಾರಿ ಮಾರ್ಗದ ಗುಂಡಿಗಳು ಮತ್ತು ಕುಡಿಯುವ ನೀರಿನ ಪೈಪ್ ಅಳವಡಿಕೆ ಸಮಯದಲ್ಲಿ ಹಾಳಾಗಿರುವ ರಸ್ತೆ ಸರಿಪಡಿಸಬೇಕು. ಕುಸಿದ ಸ್ಲ್ಯಾಬ್ ಹಾಗೂ ಅಪಘಾತ ವಲಯಗಳಲ್ಲಿ ಅಳವಡಿಸಿರುವ ಸಿಗ್ನಲ್ ಲೈಟ್ ದುರಸ್ತಿ ಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ತಾಕೀತು ಮಾಡಿದರು.
ಶಾಸಕ ಸೂಚನೆ: ಪಟ್ಟಣದ ವ್ಯಾಪ್ತಿಯ ರಾಷ್ಟ್ರೀಯ ಚರಂಡಿಗಳು ಕುಸಿದು ಪಾದಾಚಾರಿಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಜೊತೆಗೆ ಹೆದ್ದಾರಿ ಬೀದಿ ದೀಪಗಳು ಸಹ ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಹಿನ್ನೆಲೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಪುರಸಭೆ ಮುಖ್ಯಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿ, ದುರಸ್ತಿಗೆ ಕ್ರಮ ವಹಿವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ವೇಳೆ ಪುರಸಭೆ ಸದಸ್ಯ ನಾಗೇಶ್. ಎಚ್.ಆರ್.ರಾಜ್ ಗೋಪಾಲ್, ಮುಖ್ಯಾಧಿಕಾರಿ ವಸಂತಕುಮಾರಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.