ಚಾಮರಾಜನಗರ/ಹಾಸನ: ಚಾಮರಾಜನಗರ ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ 1,566 ಹೆಕ್ಟೇರ್ (3,915 ಎಕರೆ) ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ರಾಗಿ ಬೆಳೆಗೆ ಹೆಚ್ಚು ಹಾನಿಯಾಗಿದ್ದು, ಕಟಾವು ಸಾಧ್ಯವಾಗದೆ ಹಲವು ಕಡೆಗಳಲ್ಲಿ ತೆನೆಗಳು ನೆಲಕ್ಕೆ ಬಾಗಿವೆ. ಕೆಲವು ಕಡೆಗಳಲ್ಲಿ ತೆನೆಗಳಲ್ಲೇ ಮೊಳಕೆ ಬಂದಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 17,266 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು.ಕೃಷಿ ಇಲಾಖೆಯ ಪ್ರಕಾರ, ಮಳೆಯಿಂದಾಗಿ 1,335 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ನಷ್ಟವಾಗಿದೆ. ಆ ಪೈಕಿ, ಹನೂರು ತಾಲ್ಲೂಕಿನಲ್ಲೇ 1,100 ಹೆಕ್ಟೇರ್ನಲ್ಲಿ ಫಸಲು ನೀರು ಪಾಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 205 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. 120 ಹೆಕ್ಟೇರ್ ಕಡಲೆ, 91 ಹೆಕ್ಟೇರ್ ಜೋಳ, 10 ಹೆಕ್ಟೇರ್ ನೆಲಗಡಲೆ ಬೆಳೆ ನಷ್ಟವಾಗಿದೆ.
ನೆಲಕಚ್ಚಿದ ರಾಗಿ: ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತೋಟ, ಗದ್ದೆ ಹಾಗೂ ಕೃಷಿ ಜಮೀನು ಜಲಾವೃತಗೊಂಡಿವೆ.
ಕಟಾವು ಹಂತದಲ್ಲಿರುವ ಹಾಗೂ ಕಟಾವು ಮಾಡಿರುವ ರಾಗಿ ಬೆಳೆ ನಾಶವಾಗಿದೆ. ಬೇಲೂರು ತಾಲ್ಲೂಕಿನಲ್ಲಿ, ಕೃಷಿ ಇಲಾಖೆ ಮಾಹಿತಿ ಪ್ರಕಾರ 19 ಸಾವಿರ ಹೆಕ್ಟೇರ್ ರಾಗಿ ಮತ್ತು ಸಾವಿರ ಹೆಕ್ಟೇರ್ ಮೆಕ್ಕೆಜೋಳನಾಶವಾಗಿದೆ.
ಮರಗಳು ಧರೆಗೆ: ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆ ಎದುರಿನ ಮನೆ ಮೇಲೆ ಬುಧವಾರ ನಸುಕಿನಲ್ಲಿ ಬೃಹತ್ ಗಾತ್ರದ ಮರ ಉರುಳಿದೆ. ಮನೆಗೆ ಭಾಗಶಃ ಹಾನಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.