ADVERTISEMENT

ಹೋಟೆಲ್‌ ಉದ್ಯಮಿ ಆತ್ಮಹತ್ಯೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 16:11 IST
Last Updated 12 ಜೂನ್ 2020, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಮಯೂರ ಲಾಡ್ಜ್ ಪಾಲುದಾರರೊಬ್ಬರು ಶುಕ್ರವಾರ ಮುಂಜಾವು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ಅಮ್ಜಾದ್ (35) ಆತ್ಮಹತ್ಯೆ ಮಾಡಿಕೊಂಡವರು.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಲಾಡ್ಕ್‌ನ ಇನ್ನೊಬ್ಬ ಪಾಲುದಾರ ಮುತಾಲಿಬ್ ಹಾಗೂ ಮ್ಯಾನೇಜರ್ ಜಮ್ಶೀರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಅಮ್ಜಾದ್ ಹಾಗೂ ಮುತಾಲಿಬ್ ಇಬ್ಬರೂ ಬಂಡವಾಳ ಹೂಡಿ ಲಾಡ್ಜ್ ನಡೆಸುತ್ತಿದ್ದರು. ಅಮ್ಜಾದ್ ಅವರು ವಾರದಿಂದೀಚೆಗೆ ತಾವು ಬಂಡವಾಳ ಹೂಡಿದ್ದ ಮೊತ್ತವನ್ನು ವಾಪಸ್ ಕೊಡುವಂತೆ ಮುತಾಲಿಬ್ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ, ಮುತಾಲಿಬ್ ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಇಬ್ಬರಿಗೂ ಮಾತಾಗಿತ್ತು. ಎರಡು ತಿಂಗಳುಗಳಿಂದ ಊರಿಗೆ ಹೋಗಲು ಆಗಿಲ್ಲ ಎಂಬ ಬೇಸರವೂ ಅವರಿಗಿತ್ತು. ದುಡ್ಡು ಕೂಡ ಬಾರದೇ ಇದ್ದುದರಿಂದ ಶುಕ್ರವಾರ ಮುಂಜಾವು 3 ಗಂಟೆ ಸುಮಾರಿಗೆ ಲಾಡ್ಜ್ ಕೊಠಡಿಯಲ್ಲಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ತನಗೆ ಏನಾದರೂ ಆದರೆ ಅದಕ್ಕೆ ಮುತಾಲಿಬ್ ಮತ್ತು ಜಮ್ಶೀರ್ ಅವರೇ ಕಾರಣ ಎಂದು ಅಮ್ಜಾದ್ ಅವರು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಅವರ ಸಹೋದರ ಉಮರ್ ಎಂಬುವರು ನೀಡಿರುವ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಎಎಸ್‌ಪಿ ಅನಿತಾ ಬಿ.ಹದ್ದಣ್ಣವರ್, ನಗರ ಠಾಣೆ ಇನ್‌ಸ್ಪೆಕ್ಟರ್ ಎನ್.ಸಿ.ನಾಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.