ADVERTISEMENT

ಚಾಮರಾಜನಗರ | ಒಂದೇ ದಿನ ಏಳು ಬಾಲ್ಯವಿವಾಹಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 12:20 IST
Last Updated 15 ಜೂನ್ 2020, 12:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯ ವಿವಿಧ ಕಡೆ ಎರಡು ದಿನಗಳ ಅಂತರಲ್ಲಿ ಒಂಬತ್ತು ಬಾಲ್ಯವಿವಾಹಗಳಿಗೆ ತಡೆ ಒಡ್ಡಲಾಗಿದೆ. ಸೋಮವಾರ ಒಂದೇ ದಿನ ಏಳು ಕಡೆಗಳಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ.

ಮಕ್ಕಳ ಸಹಾಯವಾಣಿ (1098) ಬಂದ ದೂರುಗಳ ಆಧಾರದಲ್ಲಿ ಸಹಾಯವಾಣಿ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಥಳೀಯ ಪೊಲೀಸರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿ ಬಾಲಕಿಯರ ಮದುವೆಯನ್ನು ತಪ್ಪಿಸಿದ್ದಾರೆ.

ಸೋಮವಾರ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಇಂಡಿಗನತ್ತದಲ್ಲಿ 16 ವರ್ಷದ ಬಾಲಕಿ, ಲೊಕ್ಕನಹಳ್ಳಿಯಲ್ಲಿ 15 ವರ್ಷದ ಬಾಲಕಿ, ಯಳಂದೂರು ತಾಲ್ಲೂಕಿನ ವೈ.ಕೆ.ಮೋಳೆಯಲ್ಲಿ 14 ವರ್ಷದ ಹೆಣ್ಣು ಮಗಳು ಹಾಗೂ ಚಾಮರಾಜನಗರ ತಾಲ್ಲೂಕಿನ ಅರಕಲವಾಡಿ ಗ್ರಾಮದಲ್ಲಿ 16 ವರ್ಷದ ಬಾಲಕಿಯ ಮದುವೆ ಯತ್ನಗಳನ್ನು ನಿಲ್ಲಿಸಲಾಗಿದೆ.

ADVERTISEMENT

ಶೆಟ್ಟಿಹಳ್ಳಿಯ ಸುತ್ತಮುತ್ತ ಮೂರು ಮದುವೆಗಳನ್ನು ತಡೆಯಲಾಗಿದೆ ಎಂದು ಮಕ್ಕಳ ಸಹಾಯವಾಣಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಚಾಮರಾಜನಗರ ತಾಲ್ಲೂಕಿನ ಅಮಚವಾಡಿ, ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರುಗಳಲ್ಲಿ ಹೆಣ್ಣುಮಕ್ಕಳ ಮದುವೆ ಯತ್ನವನ್ನು ಭಾನುವಾರ ತಡೆಯಲಾಗಿದೆ.

ಚಾಮರಾಜನಗರ ಪಟ್ಟಣದಲ್ಲಿ ಒಂದು ಮದುವೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಮನೆಗೆ ಹೋಗಿ ವಿಚಾರಿಸಿದಾಗ, ಕುಟುಂಬದವರು ಗೃಹ ಪ್ರವೇಶ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ಮದುವೆ ನಡೆದಿರುವುದು ನಿಜವಾದರೆ ನಾವು ಪ್ರಕರಣ ದಾಖಲಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಆ ಬಳಿಕ, ಪ್ರಕರಣ ದಾಖಲಿಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.