ADVERTISEMENT

ಯಳಂದೂರು | ಚಿರತೆ ಸೆರೆಗೆ ಕೂಂಬಿಂಗ್; ಗ್ರಾಮಗಳ ಸುತ್ತಮುತ್ತ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 6:40 IST
Last Updated 1 ಆಗಸ್ಟ್ 2023, 6:40 IST
ಕುಂತೂರು ಬಂಡೆ ಏರಿ ಕುಳಿತ ಚಿರತೆ ಸೆರೆಗೆ ಯಳಂದೂರು ವನ್ಯಜೀವಿ ವಲಯದ ವನ ಪಾಲಕರು ಸೋಮವಾರ ಕೂಂಬಿಂಗ್ ನಡೆಸಿದರು.
ಕುಂತೂರು ಬಂಡೆ ಏರಿ ಕುಳಿತ ಚಿರತೆ ಸೆರೆಗೆ ಯಳಂದೂರು ವನ್ಯಜೀವಿ ವಲಯದ ವನ ಪಾಲಕರು ಸೋಮವಾರ ಕೂಂಬಿಂಗ್ ನಡೆಸಿದರು.   

ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಕಳೆದ ಹತ್ತು ದಿನಗಳಿಂದ ಸಂಚಲನ ಸೃಷ್ಟಿಸಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಸೋಮವಾರ ಕೂಂಬಿಂಗ್ ನಡೆಸಿತು. ಆದರೆ, ಚಿರತೆ ಸಿಗದೆ ವನಪಾಲಕರು ನಿರಾಸೆಯಿಂದ ಹಿಂದಿರುಗಿದರು.

ಭಾನುವಾರ ಕುಂತೂರು ಗುಡ್ಡದ ಬಂಡೆ ಏರಿ ಚಿರತೆ ಕುಳಿತಿದ್ದ ಚಿತ್ರ ಜಾಲತಾಣದಲ್ಲಿ ಹರಿದಾಡಿತ್ತು. ಹಾಗಾಗಿ, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಕುಳಿತ ಬಂಡೆ ಹಾಗೂ ಅಕ್ಕಪಕ್ಕದ ಪೊದೆ ಪರಿಶೀಲಿಸಿದರೂ ಸುಳಿವು ಸಿಗಲಿಲ್ಲ. ಸಂಜೆ ತನಕ ಬೋನಿಗೂ ಬೀಳಲಿಲ್ಲ. ಬಲಿ ಜೀವಿಯನ್ನು ಕಟ್ಟಿದ ಸ್ಥಳಕ್ಕೂ ಬರಲಿಲ್ಲ ಎಂದು ಸಿಬ್ಬಂದಿ ಹೇಳಿದರು.

ಮಲ್ಲಿಗೆಹಳ್ಳಿ, ಕೆಸ್ತೂರು, ಹೊಸೂರು, ಕುಂತೂರು ಮೋಳೆ, ಟಗರುಪುರ ಸುತ್ತಮುತ್ತ ಗ್ರಾಮಸ್ಥರಿಗೆ ಚಿರತೆ ಹಾವಳಿ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ಚಿರತೆ ಭಯ ಕಾಡಿದೆ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

‘ಗ್ರಾಮ ಮತ್ತು ಮುಖ್ಯ ರಸ್ತೆ ಸುತ್ತಮುತ್ತ ಚಿರತೆ ಓಡಾಡುತ್ತಿದ್ದು, ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಬಾಲಕನನ್ನು ಗಾಯಗೊಳಿಸಿ ಪರಾರಿಯಾಗಿತ್ತು. ಜನರ ನಡುವೆ ನುಗ್ಗಿ ನಾಯಿಗಳನ್ನು ಹೊತ್ತೊಯ್ದಿತ್ತು. ಈ ಘಟನೆಯಿಂದ ನಿವಾಸಿಗಳು ಭಯದಿಂದ ತತ್ತರಿಸಿದ್ದರು. ಐದಾರು ಶಾಲೆಗಳ ವಿದ್ಯಾರ್ಥಿಗಳ ಸಂಚಾರಕ್ಕೂ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ರಕ್ಷಣೆ ನೀಡಿದ್ದು, ಜಾಗೃತಿ ಮೂಡಿಸುತ್ತಿರುವುದು ಸಮಾಧಾನ ತಂದಿದೆ’ ಎಂದು ಮಲ್ಲಿಗೆಹಳ್ಳಿ ಮಹಾಂತೇಶ್ ಹೇಳಿದರು.

‘ಚಿರತೆ ಮುಖಾಮುಖಿ ಕಾಣಿಸಿಕೊಂಡಿದೆ. ಆದರೆ, ಬೋನಿಗೆ ಬಿದ್ದಿಲ್ಲ. 50ಕ್ಕೂ ಹೆಚ್ಚಿನ ಸಿಬ್ಬಂದಿ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದು, ಶೀಘ್ರ ಚಿರತೆ ಬಂಧನಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಯಳಂದೂರು ವನ್ಯಜೀವಿ ವಲಯದ ಆರ್ ಎಫ್ ಒ ಲೋಕೇಶ್ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.