ADVERTISEMENT

ಕೋವಿಡ್‌ ವದಂತಿಯಿಂದ ಕೊಳ್ಳೇಗಾಲದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:02 IST
Last Updated 21 ಜೂನ್ 2020, 15:02 IST
ತಹಶೀಲ್ದಾರ್‌ ಕುನಾಲ್‌ ಅವರು ರೇಷ್ಮೆಗೂಡಿನ ಮಾರುಕಟ್ಟೆಗೆ ಭೇಟಿ ನೀಡಿ ಮಾಹಿತಿ ಪಡೆದರು
ತಹಶೀಲ್ದಾರ್‌ ಕುನಾಲ್‌ ಅವರು ರೇಷ್ಮೆಗೂಡಿನ ಮಾರುಕಟ್ಟೆಗೆ ಭೇಟಿ ನೀಡಿ ಮಾಹಿತಿ ಪಡೆದರು   

ಕೊಳ್ಳೇಗಾಲ: ಇಲ್ಲಿನ ಮುಡಿಗುಂಡದ ರೇಷ್ಮೆಗೂಡಿನ ಮಾರುಕಟ್ಟೆಗೆ ಬಂದ ರೈತರೊಬ್ಬರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂಬ ವದಂತಿ ಭಾನುವಾರ ಹರಡಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಯಿತು.

ಮಾರುಕಟ್ಟೆಗೆ ಬಂದಿದ್ದ ಇತರೆ ರೈತರು, ರೀಲರ್‌ಗಳು ಹಾಗೂ ಮಾಹಿತಿ ತಿಳಿದ ಅಧಿಕಾರಿಗಳೂ ಸ್ವಲ್ಪ ಕಾಲ ಗೊಂದಲದಲ್ಲಿ ಸಿಲುಕಿದರು.

ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ಎಂದಿನಂತೆ ವಹಿವಾಟು ನಡೆಯುತ್ತಿತ್ತು.ರಾಮನಗರ ಜಿಲ್ಲೆಯ ಕನಕಪುರದಿಂದ ಬಂದಿದ್ದ ರೈತರೊಬ್ಬರು ಪದೇ ಪದೇ ಕೆಮ್ಮು ಹಾಗೂ ಸೀನುತ್ತಿದ್ದರು.ಇದನ್ನು ಕಂಡು ಅವರ ಪಕ್ಕದಲ್ಲಿದ್ದ ರೈತರು ಹಾಗೂ ರೀಲರ್‌ಗಳು ಭಯಗೊಂಡರು.

ADVERTISEMENT

ಇದೇ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು, ಆ ರೈತನಿಗೆ ಕೊರೊನಾ ವೈರಸ್‌ ಸೋಂಕು ‌ಇದೆ ಎಂಬ ಸುದ್ದಿ ಹಬ್ಬಿಸಿದರು. ಆತಂಕಗೊಂಡ ರೈತರು ಹಾಗೂ ರೀಲರ್‌ಗಳು ವಹಿವಾಟು ಸ್ಥಗಿತಗೊಳಿಸಿ ಹೊರ ಬಂದರು.

ತಕ್ಷಣವೇ ಮಾರುಕಟ್ಟೆಯ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಕುನಾಲ್‌ ಅವರಿಗೆ ಮಾಹಿತಿ ನೀಡಿದರು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿದರು.

‘ಆ ರೈತರ ಗ್ರಾಮದಲ್ಲಿ ಕೋವಿಡ್‌–19 ‍ಪ್ರಕರಣ ವರದಿಯಾಗಿಲ್ಲ. ಅವರಲ್ಲಿ ರೋಗ ಲಕ್ಷಣಗಳೂ ಇಲ್ಲ. ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅವರ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಕುನಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ರೈತರೊಂದಿಗೆ ಮಾತನಾಡಿದ್ದೇನೆ. ತಮಗೆ ಯಾವ ರೋಗ ಲಕ್ಷಣ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಿದ್ದರೂ, ನಾವು ಈ ರೈತರ ಬಗ್ಗೆ ಅವರ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದುಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.