ಚಾಮರಾಜನಗರ: ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಬೇಕು ಎಂದು ಹಾರೈಸಿ ಜಿಲ್ಲೆಯ ಹಲವೆಡೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರ್ಸಿಬಿ ಗೆಲುವಿಗೆ ಶಿವ ಅಷ್ಟೋತ್ತರ ಬಿಲ್ವಾರ್ಚನೆ ನಡೆಯಿತು. ಬೆಂಗಳೂರಿನಿಂದ ಬಂದಿದ್ದ ಭಕ್ತರು ಬಿಲ್ವಾರ್ಚನೆ ಮಾಡಿಸಿದ್ದು ಅವರ ಅಭಿಲಾಶೆಯಂತೆ ಆರ್ಸಿಬಿ ತಂಡದ ಗೆಲುವಿಗೆ ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ದೇವಸ್ಥಾನದ ಸಿಬ್ಬಂದಿ ಮಾಹಿತಿ ನೀಡಿದರು.
ಹರಳಕೋಟೆ ದೇಗುಲದಲ್ಲೂ ಪೂಜೆ:
ಚಾಮರಾಜನಗರ ತಾಲ್ಲೂಕಿನ ಪ್ರಸಿದ್ಧ ಹರಳಕೋಟೆ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಆರ್ಸಿಬಿ ಗೆಲುವಿಗಾಗಿ ವಿಶೇಷ ಪೂಜೆ ನಡೆಯಿತು. ಬೆಂಗಳೂರು ಆಟಗಾರರ ಹೆಸರಿನಲ್ಲಿ ವಿಶೇಷ ಅರ್ಚನೆ, ಸಂಕಲ್ಪ ಪೂಜೆ ಮಾಡಿಸಲಾಯಿತು. ಅರ್ಚಕ ಅನಂತ ಪ್ರಸಾದ್ ವಿಶೇಷ ಪೂಜೆ ನೆರವೇರಿಸಿದರು.
ಕಳೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಭಾರತದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದಾಗ ಇಷ್ಟಾರ್ಥ ಸಿದ್ಧಿಸಿತ್ತು. ಈ ಬಾರಿಯ ಪೂಜೆಯಲ್ಲೂ ಹೂವಿನ ಪ್ರಸಾದ ದೊರೆತಿದ್ದು ಬೆಂಗಳೂರು ತಂಡ ಗೆಲ್ಲುವ ವಿಶ್ವಾಸವಿದೆ ಎಂದು ಅಭಿಮಾನಿಗಳಾದ ತೇಜು, ಮಲ್ಲೇಶ್, ಚರಣ್ ತಿಳಿಸಿದರು.
ನಗರದ ಭುವನೇಶ್ವರಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಆರ್ಸಿಬಿ ಗೆಲುವಿಗೆ ಶುಭಾಶಯ ಕೋರಿ ಅಭಿಮಾನಿಗಳು ಫ್ಲೆಕ್ಸ್ ಹಾಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.