ಪ್ರಜಾವಾಣಿ ವಾರ್ತೆ
ಗುಂಡ್ಲುಪೇಟೆ: ಕಾಡಾನೆ ದಾಳಿಗೆ ಟೊಮೆಟೊ ತೆಂಗಿನ ಸಸಿ ಹಾಗೂ ಬಾಳೆ ಬೆಳೆ ನಾಶವಾಗಿರುವ ಘಟನೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಹೊರ ವಲಯದ ರೈತರ ಜಮೀನುಗಳಲ್ಲಿ ನಡೆದಿದೆ.
ಗ್ರಾಮದ ಅಂಕೇಶ್ ಮತ್ತು ಮಲ್ಲಣ್ಣ ಎಂಬುವವರ ಬಾಳೆ ಬೆಳೆ, ಕೆಂಪಣ್ಣ ಎಂಬ ರೈತನ ಟೊಮೆಟೊ ತೆಂಗಿನ ಸಸಿ, ಮಹದೇವಪ್ಪ ಎಂಬುವರ ಬೀನ್ಸ್ ಮತ್ತು ತೆಂಗಿನ ಗಿಡಗಳ ಮೇಲೆ ಕಾಡಾನೆ ಲಗ್ಗೆಯಿಟ್ಟು ತುಳಿದು ತಿಂದು ನಾಶಪಡಿಸಿವೆ. ಸಂಬಂಧಪಟ್ಟ ಬಂಡೀಪುರದ ಓಂಕಾರ ವಲಯ ಅರಣ್ಯಾಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರೈತರು ಮನವಿ ಮಾಡಿದರು.
ಕಡಿವಾಣ ಹಾಕಿ: ಇಲ್ಲಿ ಕಾಡು ಪ್ರಾಣಿಗಳು ರೈತರ ಜಮೀನುಗಳತ್ತ ಬರದಂತೆ ತಡೆದಿದ್ದ ಕಂದಕ ಮಳೆ, ಇತರೆ ಪ್ರಾಕೃತಿಕ ಕಾರಣಗಳಿಗೆ ಮುಚ್ಚಿ ಹೋಗಿದೆ. ಇದರಿಂದ ಕಾಡಾನೆ ಸುಲಭವಾಗಿ ರೈತರ ಜಮೀನುಗಳಿಗೆ ಬಂದು ಹೋಗುತ್ತಿದ್ದು, ಬಾಳೆ, ಮುಸುಕಿನ ಜೋಳ, ಟೊಮೆಟೊ, ತಕರಾರಿ ಬೆಳೆಗಳು, ಬೆಳವಣಿಗೆ ಹಂತದ ತೆಂಗು ಇತರೆ ಬೆಳೆಗಳನ್ನು ನಾಶ ಮಾಡುತ್ತಿವೆ. ಮಾರುಕಟ್ಟೆಗೆ ಸಾಗಿಲು ಸಂಗ್ರಹಿಸಿಟ್ಟ ಟೊಮೆಟೊ ಕ್ರೇಟ್ಗಳನ್ನು ನೆಲಕ್ಕುರುಳಿಸಿ, ತಿಂದು ಹಾಳು ಮಾಡುತ್ತಿವೆ. ತೋಟದ ಮನೆಗಳಲ್ಲಿ ವಾಸಿಸುವರು ಇನ್ನೂ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.