ಚಾಮರಾಜನಗರ: ಚೆಲುವ ಚಾಮರಾಜನಗರ ಅಭಿಯಾನದ ಭಾಗವಾಗಿ ನಗರದಲ್ಲಿ ಆರಂಭಗೊಂಡಿರುವ ರಾತ್ರಿ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ರಾತ್ರಿ ಪರಿಶೀಲಿಸಿದರು.
ಚಾಮರಾಜೇಶ್ವರ ದೇವಾಲಯ, ರಥದ ಬೀದಿ, ಗುಂಡ್ಲುಪೇಟೆ ವೃತ್ತ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿದ ಅವರು,ಪೌರಕಾರ್ಮಿಕರಿಗೆ ನೈರ್ಮಲ್ಯ ಕೆಲಸ ನಿರ್ವಹಣೆಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವಂತೆ ನಗರಸಭೆ ಆಯುಕ್ತ ಎಂ.ರಾಜಣ್ಣ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಪೌರ ಕಾರ್ಮಿಕರ ಅಹವಾಲನ್ನೂ ಆಲಿಸಿದರು. ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವುದರಿಂದ ಏನಾದರೂ ತೊಂದರೆಗಳು ಇವೆಯೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದಎಂ.ಆರ್.ರವಿ ಅವರು, ‘ಬೆಳಿಗ್ಗೆಯಿಂದ ರಾತ್ರಿಯವರೆಗೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಯಾ ರಾತ್ರಿಯೇ ತೆರವುಗೊಳಿಸಿ, ಸ್ವಚ್ಛಗೊಳಿಸುವುದರಿಂದ ತ್ಯಾಜ್ಯ ಕೊಳೆಯಲು ಅವಕಾಶವಿರುವುದಿಲ್ಲ. ರಾತ್ರಿಯೇ ನೈರ್ಮಲ್ಯ ಕೆಲಸ ಪೂರ್ಣಗೊಳ್ಳುವುರಿಂದ ಬೆಳಿಗ್ಗೆ ನಗರ ಪ್ರದೇಶ ಸ್ವಚ್ಛಗೊಂಡು ಸುಂದರವಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.