ADVERTISEMENT

ದೇವರ ದಾಸಿಮಯ್ಯ ವಚನ ಸಂದೇಶ ಸ್ಮರಣೀಯ- ಶಾಸಕ ಸಿ.ಎಸ್‌.ನಿರಂಜನಕುಮಾರ್‌

ಕಾರ್ಯಕ್ರಮ ಉದ್ಘಾಟಿಸಿ, ವಚನಕಾರನ ಸ್ಮರಿಸಿದ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 14:25 IST
Last Updated 26 ಏಪ್ರಿಲ್ 2022, 14:25 IST
ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಉದ್ಘಾಟಿಸಿದರು. ಕೇಂದ್ರ ಪರಿಹಾರಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಆಶಾ ಇದ್ದರು
ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಉದ್ಘಾಟಿಸಿದರು. ಕೇಂದ್ರ ಪರಿಹಾರಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಆಶಾ ಇದ್ದರು   

ಚಾಮರಾಜನಗರ: ದೇವರ ದಾಸಿಮಯ್ಯ ಅವರು ಸಮಾನತೆ, ಸಮಾಜದ ಜಾಗೃತಿಗಾಗಿ ನೀಡಿದ ಸಂದೇಶಗಳು ವಚನಗಳು ಇಂದಿಗೂ ಸ್ಮರಣೀಯವಾಗಿವೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಮಂಗಳವಾರ ತಿಳಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂದಿನ ಕಾಲಘಟ್ಟದಲ್ಲಿಯೇ ತಮ್ಮ ವಚನಗಳ ಮೂಲಕ ದೇವರ ದಾಸಿಮಯ್ಯ ಅವರು ಉತ್ತಮ ಮೌಲ್ಯಗಳ ಸಂದೇಶ ಸಾರಿದ್ದಾರೆ. ಸಮಾಜದ ಜಾಗೃತಿಗೆ ಶ್ರಮಿಸಿದ್ದಾರೆ. ನೂರಾರು ವರ್ಷಗಳ ನಂತರವೂ ಅವರು ಮಾಡಿದ ಉತ್ತಮ ಕಾರ್ಯಗಳನ್ನು ಇಂದೂ ನಾವು ಸ್ಮರಿಸುತ್ತೇವೆ’ ಎಂದರು.

ADVERTISEMENT

‘ವಚನಕಾರರು, ದಾರ್ಶನಿಕರು, ಮಹಾನ್ ಪುರುಷರ ಸ್ಮರಿಸುವ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಬಾರದು. ಸಂಕುಚಿತ ಮನೋಭಾವನೆ ಹೋಗಬೇಕಿದೆ. ಎಲ್ಲರೂ ಸೇರಿ ಭಾಗಿಯಾಗಿ ಸ್ಮರಣೆ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎನ್.ಲಕ್ಷ್ಮೀಪತಿ ಅವರು ಮಾತನಾಡಿ ದೇವರ ದಾಸಿಮಯ್ಯ ಅವರು ರಚಿಸಿದ ವಚನಗಳು ಜನ ಸಾಮಾನ್ಯರಿಗೆ ಹೆಚ್ಚು ಪ್ರಚಾರವಾಗಿಲ್ಲ. ಆದರೆ, ಇವರ ವಚನಗಳನ್ನು ಬಸವಣ್ಣ ಕೊಂಡಾಡಿದ್ದಾರೆ. ನೆರೆ ಹೊರೆಯವರ ಜೊತೆ ಪ್ರೀತಿ ಸಹಬಾಳ್ವೆ ಮಾಡಬೇಕೆಂಬ ಮಹತ್ತರ ಸಂದೇಶವನ್ನು ದೇವರ ದಾಸಿಮಯ್ಯ ಅವರ ವಚನಗಳಲ್ಲಿ ಕಾಣಬಹುದಾಗಿದೆ’ ಎಂದರು.

‘ದೇವರ ದಾಸಿಮಯ್ಯ ಅವರು ನೇಕಾರಿಕೆ ಕಾಯಕದಲ್ಲಿ ತೊಡಗುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ವೈಯಕ್ತಿಕ ಜೀವನಕ್ಕಾಗಿ ಬದುಕು ನಡೆಸದೇ ಹಲವರಿಗೆ ದಾರಿದೀಪವಾಗಿದ್ದಾರೆ. ಸಮಾಜದ ಅಂಕುಡೊಂಕು ಗಳನ್ನು ತಿದ್ದುವಲ್ಲಿ ಮುಂದಾಗಿದ್ದಾರೆ. ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ’ ಎಂದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಆಶಾ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ಲೆಕ್ಕಾಧಿಕಾರಿ ಎಚ್.ಎಸ್.ಗಂಗಾಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಎಚ್.ಚೆನ್ನಪ್ಪ, ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.