ಚಾಮರಾಜನಗರ:ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹನೂರಿನಲ್ಲಿ ಇದೇ 23 ಮತ್ತು 24ರಂದು ನಡೆಯಲಿದೆ.
ಹಿರಿಯ ಮಕ್ಕಳ ಸಾಹಿತಿ, ನಾಟಕಕಾರ, ಕವಿ ಚಾಮಶೆಟ್ಟಿ ಸಿ.ಮಧುವನಹಳ್ಳಿ ಅವರುಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ವಿನಯ್ ಹೇಳಿದ್ದಾರೆ.
ಸಮ್ಮೇಳನಾಧ್ಯಕ್ಷರ ಪರಿಚಯ: ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಗ್ರಾಮದ ಚಾಮಶೆಟ್ಟಿ ಅವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ 1934ರ ಆಗಸ್ಟ್ 24ರಂದು ಜನಿಸಿದರು.
ಮಧುವನಹಳ್ಳಿ, ಕೊಳ್ಳೇಗಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದಿರುವ ಅವರು, ಸಿಂಗಾನಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1955ರಿಂದ 77ರ ವರೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮೊದಲ ಮಕ್ಕಳ ಸಾಹಿತಿ ಎಂಬ ಹೆಗ್ಗಳಿಕೆ ಇವರದ್ದು.
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಅವರು 21 ನಾಟಕಗಳು, ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಪ್ರಮುಖ ಕೃತಿಗಳು: ಭಗೀರಥ, ಹೊಂಗೆಮರ, ನಾಗಪಂಚಮಿ, ವ್ಯಾಘ್ರ ರಾಕ್ಷಸ, ಸಾಮ್ರಾಟ ಖಾರವೇಲ, ಬುರುಡೆ ರಾಕ್ಷಸ, ಕಾವೇರಿ, ಅಂಧ ಮಹಾದೇವಿ, ರೂಪಾಂಯರ, ಶಬರಿಗಾದರು ಅತಿಥಿ ಶ್ರೀರಾಮಲಕ್ಷಣ, ಬೇವಿನಮರ, ಕ್ರೀಡಾಸಿರಿ, ಪ್ರವಾದಿ ಇಬ್ರಾಹಿಂ, ಶಿವಭಕ್ತ ಕೇಶಿರಾಜ, ಕ್ರೀಡೆ ಮುತ್ತು, ಅಮೃತಾನ್ನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.