ADVERTISEMENT

ಬಿಳಿಗಿರಿರಂಗನಬೆಟ್ಟ: ಪ್ರಾಣಿಗಳ ಸಂಚಾರಕ್ಕೆ ಅಡ್ಡಿ, ವನ್ಯಪ್ರೇಮಿಗಳ ಆಕ್ಷೇಪ

ಕೆರೆಯಂಚಿನಲ್ಲಿ ಸಿಮೆಂಟ್ ಕಂಬ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 16:19 IST
Last Updated 3 ಅಕ್ಟೋಬರ್ 2021, 16:19 IST
ಬಿಳಿಗಿರಿರಂಗನಬೆಟ್ಟದ ರಸ್ತೆಯ ಬದಿಯಲ್ಲಿ ಸಿಮೆಂಟ್‌ ಕಂಬಗಳನ್ನು ನೆಟ್ಟಿರುವುದು
ಬಿಳಿಗಿರಿರಂಗನಬೆಟ್ಟದ ರಸ್ತೆಯ ಬದಿಯಲ್ಲಿ ಸಿಮೆಂಟ್‌ ಕಂಬಗಳನ್ನು ನೆಟ್ಟಿರುವುದು   

ಯಳಂದೂರು:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಇದೇ 7 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡುತ್ತಿರುವುದರಿಂದ ಅವರ ವಾಹನ ಸಾಗುವ ರಸ್ತೆ, ಕೆರೆ-ಕಟ್ಟೆ ಬದಿಗಳ ದುರಸ್ತಿ ನಡೆಯುತ್ತಿದೆ.

ಬಿಳಿಗಿರಿರಂಗನಬೆಟ್ಟದ ಬಳಿಯ ಕೆರೆ ಕಟ್ಟೆಗಳು ಮತ್ತು ಇಳಿಜಾರು ಪ್ರದೇಶಗಳಲ್ಲಿ ರಸ್ತೆಯ ಬದಿಗಳಲ್ಲಿ ಸಿಮೆಂಟ್ ಕಂಬ ಅಳವಡಿಸಲಾಗುತ್ತಿದ್ದು, ಇದಕ್ಕೆ ವನ್ಯಪ್ರೇಮಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ರಕ್ಷಿತಾರಣ್ಯದಲ್ಲಿ ಆನೆಗಳು ಹಾಗೂ ಇತರ ಪ್ರಾಣಿಗಳು ಮುಕ್ತವಾಗಿ ಓಡಾಟಬೇಕು. ಈ ರೀತಿ ಕಂಬಗಳನ್ನು ಅಳವಡಿಸಿದರೆ ಅವುಗಳ ಓಡಾಟಕ್ಕೆ ಅಡಚಣೆಯಾಗುತ್ತದೆ. ಇದು ಕಾನೂನಿನ ಉಲ್ಲಂಘನೆ ಎಂದು ಅವರು ದೂರಿದ್ದಾರೆ.

ADVERTISEMENT

ಕಾಡಿನಲ್ಲಿರುವ ರಸ್ತೆಯು ಕಿರಿದಾಗಿದ್ದು, ರಾಷ್ಟ್ರಪತಿ ಅವರ ವಾಹನ ಹಾಗೂ ಬೆಂಗಾವಲು ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯು ಕಾಂಕ್ರೀಟ್‌ ಹಾಕಿ ಸಿಮೆಂಟ್‌ ಕಂಬಗಳನ್ನು ಅಳವಡಿಸುತ್ತಿದೆ.

ಬಿಆರ್‌ಟಿಯ ನವಿಲುಕೆರೆಯಿಂದ ಸೋಮರಸನ ಕೆರೆ ತನಕ ಐದಾರು ಜಲ ಮೂಲಗಳು ಇವೆ. ಈ ಭಾಗಗಳ ಸುತ್ತಮುತ್ತ ಆನೆ, ಚಿರತೆ, ಕರಡಿ ಮತ್ತು ಹುಲಿಗಳಹಾದಿಯೂ ಇದೆ. ಬಹುತೇಕ ಜೀವಿಗಳು ಇಲ್ಲಿ ಅಡ್ಡಾಡಲು ಮತ್ತು ವಿಶ್ರಮಿಸಲು ಇದೇರಸ್ತೆಯನ್ನು ಅವಲಂಬಿಸಿವೆ. ಸಿಮೆಂಟ್ ಕಂಬಗಳಅಳವಡಿಕೆಯಿಂದ ಜೀವಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಕಾಳಜಿ.

‘ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಪರಿಸರ ಸಂರಕ್ಷಣಾ ನಿಯಮ-1986 ಮತ್ತು ಜೀವ ವೈವಿಧ್ಯ ಕಾಯ್ದೆ- 2002ರ ಪ್ರಕಾರ ಹುಲಿ ಅಭಯಾರಣ್ಯದಲ್ಲಿ ಹೊಸ ಕಾಮಗಾರಿ ಕೈಗೊಳ್ಳುವುದಕ್ಕೆ ಅವಕಾಶ ಇಲ್ಲ.
ಕೆರೆ ಪರಿಸರದ ಸುತ್ತ ಹೊಸ ಕಾಮಗಾರಿ ಇಲ್ಲವೇ ನವೀಕರಣ ಮಾಡುವಂತಿಲ್ಲ.ಹಾಗಾಗಿ, ಅರಣ್ಯಗಳಲ್ಲಿ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಪರಿಸರ ಪ್ರೇಮಿ ಪ್ರದೀಪ್ ಅವರು ಹೇಳಿದರು.

ತಾತ್ಕಾಲಿಕ ಅಳವಡಿಕೆ: ಡಿಸಿಎಫ್

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಡಾ.ಜಿ.ಸಂತೋಷ್ ಕುಮಾರ್ ಅವರು, 'ಬಿಳಿಗಿರಿರಗನಬೆಟ್ಟದಕೆರೆ-ಕಟ್ಟೆಗಳ ಬಳಿ ಸಿಮೆಂಟ್ ಕಂಬಗಳನ್ನು ಲೋಕೋಪಯೋಗಿ ಇಲಾಖೆ ಅಳವಡಿಸುತ್ತಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಕಾಮಗಾರಿ ತಾತ್ಕಾಲಿಕವಾಗಿದ್ದು, ರಾಷ್ಟ್ರಪತಿ ಭೇಟಿಯ ನಂತರ ತೆರವುಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.