ಯಳಂದೂರು: ಭಾರತ ಅಪಾರ ಸಾಧನೆ ಮಾಡಿದೆ. ಆದರೂ, ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ ಇದೆ. ಈ ಅನಿಷ್ಠ ಪದ್ಧತಿ ತಡೆಯಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಸಿವಿಲ್ ನ್ಯಾಯಾಧೀಶೆ ಸುಜಾತ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಠಿಣ ಕಾನೂನು ತಂದು ಬಾಲಕಾರ್ಮಿಕ ಪದ್ಧತಿ ನಿಷೇಧಿಸಿದೆ. ಶಾಲಾ ಕಾಲೇಜುಗಳಲ್ಲಿ ವಸತಿಯುತ ಶಿಕ್ಷಣ ಮತ್ತು ಸಮವಸ್ತ್ರಕೊಟ್ಟು ಕಲಿಕೆಗೆ ಒತ್ತಾಯಿಸಿದೆ. ಆದರೂ, ಗ್ರಾಮೀಣ ಮತ್ತು ಪಟ್ಟಣ ಪ್ರದೇಶ ಎನ್ನದೆ ಪೋಷಕರು ಮಕ್ಕಳನ್ನು ದುಡಿಮೆಗೆ ನೂಕುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವಾಗಿದ್ದಾರೆ. ಹಾಗಾಗಿ, ಈ ಸಾಮಾಜಿಕ ಸಮಸ್ಯೆಯನ್ನು ಬೇರುಸಮೇತ ಕಿತ್ತು ಹಾಕುವ ಕೆಲಸಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ, ‘ಬಾಲ್ಯದಲ್ಲಿ ದುಡಿಯುವುದರಿಂದ ಮಕ್ಕಳ ಮಾನಸಿಕ ವಿಕಾಸ ಕುಂಠಿತಗೊಳ್ಳುತ್ತದೆ ಹಾಗೂ ಕಲಿಕೆ ನಿಲ್ಲುತ್ತದೆ. ಬಾಲ್ಯದಲ್ಲಿ ಸಹಪಾಠಿಗಳ ಜೊತೆ ಕಲಿತು ಸಂತಸದಿಂದ ಇರಬೇಕಾದ ಮಗುವಿನ ಸರ್ವತೋಮುಖ ಬೆಳವಣಿಗೆ ಕುಗ್ಗುತ್ತ ಸಾಗುತ್ತದೆ. ಹಾಗಾಗಿ, ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಹೇಳಿದರು.
ಶಿಕ್ಷಕರಾದ ಮಹಾದೇವ, ಬಸವರಾಜು, ವಿದ್ಯಾರ್ಥಿಗಳಾದ ಚಂದನ್, ಸುಂದರ, ವರ್ಷಿಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.