ಚಾಮರಾಜನಗರ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಬೆಳಣಿಗೆಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೌಕರರ ಸಂಘದ ನೌಕರರ ಹಿತಕಾಯಲು ಹೆಚ್ಚು ಒತ್ತು ನೀಡಬೇಕು ಎಂದರು.
ರಿಯಾಯಿತಿಯಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ ಸಂಘಕ್ಕೆ ಹಾಗೂ ಸದಸ್ಯರಿಗೆ ಆರ್ಥಿಕ ಶಕ್ತಿ ತುಂಬಬೇಕು. ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನೌಕರರ ಗೃಹ ನಿರ್ಮಾಣ ಸಂಘದಿಂದ ನಿವೇಶನ ಹಂಚಿಕೆ ಮಾಡುತ್ತಿರುವಂತೆ ಜಿಲ್ಲೆಯಲ್ಲೂ ಹಂಚಿಕೆ ಮಾಡಬೇಕು ಎಂದರು.
ಸಂಘ ಸಂಸ್ಥೆಗಳು ಆರ್ಥಿಕವಾಗಿ ಸಬಲರಾದಾಗ ಮಾತ್ರ ಗೌರವ ಪ್ರತಿಷ್ಠೆ ಸಿಗುತ್ತದೆ. ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಜಿಲ್ಲಾ ಸಂಘಕ್ಕೆ ಮಹಿಳೆ ಅಧ್ಯಕ್ಷೆಯಾಗಿರುವುದು ವಿಶೇಷ ಹಾಗೂ ಅಭಿನಂದನೀಯವಾಗಿದ್ದು ಮಹಿಳೆಯರ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ನೌಕರರ ಸಂಘದ ಸದಸ್ಯನಾಗಿ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಂಘ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಡಾ.ಸಿ.ಎನ್.ರೇಣುಕಾದೇವಿ ಮಾತನಾಡಿ, ಜಿಲ್ಲಾ ಸರ್ಕಾರಿ ನೌಕರರ ಭವನ ಸಂಘದ ಬಹುದಿನಗಳ ಆಶಯವಾಗಿದ್ದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕಿದೆ. ನೌಕರರಿಗೆ ನಿವೇಶನಗಳನ್ನು ಹಂಚುವ ಪ್ರಸ್ತಾವವೂ ಇದ್ದು ಮುಂದೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದಿಂದ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಉದ್ದೇಶವಿದೆ. ಸಂಘದಿಂದ ಕಾರ್ಯಾಗಾರ, ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಸದಸ್ಯರ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಡಿ.ಎನ್.ಭರತ್ ಭೂಷಣ, ಕಾರ್ಯಾಧ್ಯಕ್ಷ ಮಹದೇವ ಸ್ವಾಮಿ, ಜಿಲ್ಲಾ ಖಜಾಂಚಿ ಎಂ.ಶಿವಕುಮಾರ್, ರಾಜ್ಯ ಪರಿಷತ್ ಸದಸ್ಯ ನಟರಾಜು, ಗೌರವಾಧ್ಯಕ್ಷ ಎಸ್.ಮಹದೇವಯ್ಯ, ಹಿರಿಯ ಉಪಾಧ್ಯಕ್ಷ ಎಂ.ಡಿ.ಮಹದೇವಯ್ಯ, ಚಂದ್ರಕುಮಾರ್, ಬಿ.ಪಿ.ಪ್ರಕಾಶ್, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಪ್ರಸಾದ್, ಯಳಂದೂರು ತಾಲ್ಲೂಕು ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ನಂಜುಂಡ, ಕೆ.ಎಸ್.ಮಹೇಂದ್ರ, ರವಿಕುಮಾರ್, ನಾರಾಯಣಸ್ವಾಮಿ, ಸೋಮಶೇಖರ್, ಕೆ.ರಾಚಯ್ಯ, ರಾಜ್ಯ ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯಂ, ಭವಾನಿದೇವಿ, ರಾಜಶೇಖರ ಮೂರ್ತಿ, ವೇಲುಕುಮಾರ್, ಶಿವಕುಮಾರ್, ಶಾಂತರಾಜು, ಮಹೇಶ್, ಮಲ್ಲಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.