
ಗುಂಡ್ಲುಪೇಟೆ: ಬೇಸಿಗೆ ಸಂದರ್ಭದಲ್ಲಿ ಅರಣ್ಯ ಸಂಪತ್ತು ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ತಿಳಿಸಿದರು.
ಬಂಡೀಪುರ ಕಾಡಂಚಿನ ಗ್ರಾಮ ಮದ್ದೂರು ಕಾಲೊನಿಯಲ್ಲಿ ಅರಣ್ಯ ಇಲಾಖೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮದ್ದೂರು ಕಾಲೊನಿ ಗ್ರಾಮದ ಶ್ರೀಸಾಯಿ ಗಿರಿಜನ ಪ್ರಗತಿ ಫೌಂಡೇಶನ್ ವತಿಯಿಂದ ನಡೆದ ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯದೊಂದಿಗೆ ಕಾಡಂಚಿನ ಜನರ ಭಾವನಾತ್ಮಕ ಸಂಬಂಧವಿದೆ. ಅದರಲ್ಲೂ ಗಿರಿಜನರು ಕಾಡಿನ ಮಕ್ಕಳೇ ಆಗಿದ್ದ ಕಾರಣ ಪ್ರಕೃತಿಯನ್ನು ಆರಾಧಿಸಿಕೊಂಡು ಬರುತ್ತಿದ್ದೀರಿ ಎಂದರು.
ಬೇಸಿಗೆ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಅವಘಡಗಳು ಸಂಭವಿಸಿದಾಗ ಆಗುವ ನಷ್ಟವನ್ನು ತುಂಬಲು ಯಾರಿಂದಲೂ ಆಗುವುದಿಲ್ಲ. ಆದ್ದರಿಂದ ನಾವೆಲ್ಲರೂ ಮೈಯೆಲ್ಲಾ ಕಣ್ಣಾಗಿ ಅರಣ್ಯ ಸಂಪತ್ತು ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸಬೇಕಾಗಿದೆ. ಈ ದಿನ ಅರಿವು ಕಾರ್ಯಕ್ರಮವನ್ನು ಇದೇ ಕಾರಣಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗಿರಿಜನ ಪ್ರಗತಿ ಫೌಂಡೇಶನ್ ಅಧ್ಯಕ್ಷೆ ಡಾ.ಎಸ್.ರತ್ನಮ್ಮ ಮಾತಾಡಿದರು. ನಂತರ ಬೀದಿಗಳಲ್ಲಿ ಅರಣ್ಯ ಸಂರಕ್ಷಣೆ ಮತ್ತು ಬೆಂಕಿಯಿಂದ ಕಾಡನ್ನು ರಕ್ಷಿಸುವ ಬಗ್ಗೆ ಜಾಥಾ ಹಾಗೂ ಕಿರು ನಾಟಕ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಸಮಿತಿ ಅಧ್ಯಕ್ಷ ಮಾಧು, ಗ್ರಾಮದ ಮುಖಂಡರಾದ ನಾಗರಾಜು, ರಾಜು, ಶಿವಮ್ಮ, ಮಂಜುಳ, ಶಾರದ, ನಯನ ಮತ್ತು ತಂಡದವರು, ಮದ್ದೂರು ವಲಯದ ಅರಣ್ಯ ಸಿಬ್ಬಂದಿ, ಜಾನಪದ ಕಲಾವಿದ ಎಸ್.ಗುರುರಾಜು, ಎಂ.ಕೆ.ಮನೋಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.