ADVERTISEMENT

ಸೋಮಣ್ಣ ಚಾಮರಾಜನಗರದಿಂದ ಸ್ಪರ್ಧಿ‌ಸಿ ಸಿ.ಎಂ ಆಗಲಿ: ಶಿವನಗೌಡ ನಾಯಕ್‌

ಸೋಮಣ್ಣ ಅಭಿಮಾನಿಗಳ ಬಳಗದಿಂದ ಜನ್ಮ ದಿನ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 16:02 IST
Last Updated 20 ಜುಲೈ 2022, 16:02 IST
ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಜನ್ಮದಿನದ ಸಂಭ್ರಮಾಚರಣೆ ಸಮಾರಂಭವನ್ನು ವಾಟಾಳು ವೀರಸಿಂಹಾಸನ ಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ , ಸಂಸದ ಪ್ರತಾಪ್‌ ಸಿಂಹ, ಶಾಸಕ ಶಿವನಗೌಡ ನಾಯಕ್‌ ಇತರರು ಇದ್ದರು
ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಜನ್ಮದಿನದ ಸಂಭ್ರಮಾಚರಣೆ ಸಮಾರಂಭವನ್ನು ವಾಟಾಳು ವೀರಸಿಂಹಾಸನ ಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ , ಸಂಸದ ಪ್ರತಾಪ್‌ ಸಿಂಹ, ಶಾಸಕ ಶಿವನಗೌಡ ನಾಯಕ್‌ ಇತರರು ಇದ್ದರು   

ಚಾಮರಾಜನಗರ: ‘ವಿ.ಸೋಮಣ್ಣ ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನ ಮೆಚ್ಚಿದ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ಧಿಸಿ ಮುಖ್ಯಮಂತ್ರಿಯಾಗುವ ಮೂಲಕ ಚಾಮರಾಜನಗರಕ್ಕೆ ಅಂಟಿರುವ ಕಳಂಕವನ್ನು ಹೋಗಲಾಡಿಸಲಿ’ ಎಂದು ದೇವದುರ್ಗದ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ್ ಬುಧವಾರ ತಿಳಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಿ.ಸೋಮಣ್ಣ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ವಸತಿ ಸಚಿವ ವಿ.ಸೋಮಣ್ಣ ಜನ್ಮ ದಿನದ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸೋಮಣ್ಣ ನಮ್ಮಲ್ಲೆರಿಗೂ ಮಾರ್ಗದರ್ಶಕರಾಗಿದ್ದಾರೆ. ದೇವದುರ್ಗದ ಉಪ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಲು ಅವರು ಪ್ರಮುಖ ಕಾರಣ. ಅವರ ಆಶೀರ್ವಾದದಿಂದ ಕ್ಷೇತ್ರದ ಜನರು ಹೆಚ್ಚಿನ ಬಹುಮತದಿಂದ ಗೆಲ್ಲಿಸಿದರು’ ಎಂದರು.

‘71 ವರ್ಷವಾಗಿದ್ದರೂ ಪಾದರಸದಂತೆ ಓಡಾಡುತ್ತಿದ್ದಾರೆ. ಅವರ ಹೋರಾಟ ನಮ್ಮಂಥ ಯುವಕರಿಗೆ ಸ್ಪೂರ್ತಿ. ಅವರು ಉತ್ತಮ ಆಡಳಿತಗಾರ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಅವರಿಗಿದೆ’ ಎಂದರು.

ADVERTISEMENT

ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮಾತನಾಡಿ, ‘ನಾನು ಬಿಎಸ್‌ಪಿಯಲ್ಲಿದ್ದಾಗ ಯಾವುದಾದರೂ ಸಮಾರಂಭಕ್ಕೆ ಸಹಾಯ ಮಾಡಿ ಎಂದು ಸೋಮಣ್ಣ ಅವರನ್ನು ಕೇಳುತ್ತಿದ್ದಾಗ ‘ಎಷ್ಟು ಬೇಕಯ್ಯ’ ಎಂದು ಕೇಳಿ ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕೊಡುತ್ತಿದ್ದರು. ಕೆಲಸ ಮಾಡುವವರಿಗೆ ಪಕ್ಷಭೇದ ಮ‌ರೆತು ಸಹಾಯ ಮಾಡುತ್ತಿದ್ದರು. ಅಂತಹ ವ್ಯಕ್ತಿತ್ವ ಅವರದು. ಜಿಲ್ಲೆಯ ಅಭಿವೃದ್ಧಿಗಾಗಿ ಅವರು ನೀಲನಕ್ಷೆ ತಯಾರಿಸಿದ್ದಾರೆ. ಮತ್ತೊಮ್ಮೆ ಗೆದ್ದು ಅವರು ಜಿಲ್ಲಾ ಉಸ್ತುವಾರಿ ಸಚಿವರಾದರೆ ಜಿಲ್ಲೆಯ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ’ ಎಂದರು.

ವಾಟಾಳು ವೀರಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಅವರು ಸೋಮಣ್ಣ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಂದಿಯನ್ನು ಸನ್ಮಾನಿಸಲಾಯಿತು.

ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ನಾಯಕ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ, ಸೋಮಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಕೆ. ವೀರಭದ್ರಸ್ವಾಮಿ, ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ, ಮುಖಂಡರಾದ ಉಡಿಗಾಲ ಪಾಪಣ್ಣ, ಕೊಡಸೋಗೆ ಶಿವಬಸಪ್ಪ, ಕಾಳನಹುಂಡಿ ಗುರುಸ್ವಾಮಿ, ಎ.ಎಂ.ಗುರುಸ್ವಾಮಿ, ಮಹೇಶ್ ಪಟೇಲ್, ಕೆಲ್ಲಂಬಳ್ಳಿ ನಾಗರಾಜಪ್ಪ, ಮರಿಯಾಲ ಸ್ವಾಮಿ, ಕಿಲಗೆರೆ ಬಸವರಾಜು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಬೇಡರಪುರ ಬಸವಣ್ಣ ಇದ್ದರು.

‘ಈ ಕ್ಷೇತ್ರದಿಂದಲೇಆಶೀರ್ವಾದ ಮಾಡಿ’

ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಮಾಡಿದ ಕಾರ್ಯಕ್ರಮಗಳು ಇಂದಿಗೂ ಸ್ಮರಣೀಯ. ಮೈಸೂರು ದಸರಾವನ್ನು ಒಂದು ತಿಂಗಳ ಅವಧಿಯಲ್ಲಿ ಅದ್ಬುತವಾಗಿ ಮಾಡಿದ ಸಾಧನೆ ಅವರದ್ದು’ ಎಂದರು.

71ನೇ ವಯಸ್ಸಿನಲ್ಲೂ ಕಿರಿಯರು ನಾಚುವಂತೆ ಕೆಲಸ ಮಾಡುತ್ತಿರುವ ಸೋಮಣ್ಣ ಅವರಿಗೆ ಚಾಮರಾಜನಗರ ಜಿಲ್ಲೆಯ ಬಗ್ಗೆ ಅಪಾರವಾದ ಗೌರವ, ಹೆಮ್ಮೆ ಇದೆ. ಚಾಮರಾಜನಗರ ಜಿಲ್ಲೆಯಿಂದ ಅವರನ್ನು ಮುಂದಿನ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿ, ಮುಖ್ಯಮಂತ್ರಿಯಾಗುವಂತೆ ಎಲ್ಲರೂ ಆಶೀರ್ವಾದ ಕ್ಷೇತ್ರದ ಅಭಿವೃದ್ಧಿಗಾಗಿ ಸೋಮಣ್ಣ ಅವರು ಇಲ್ಲಿಂದಲೇ ನಿಂತು ಗೆಲ್ಲಬೇಕಾಗಿದೆ’ ಎಂದರು.

‘ಎರಡು ಬಾರಿ ಸಂಸತ್‌ ಸದಸ್ಯನಾಗಿರುವ ನನಗೆ ಮನೆ ಮಾಡಿಕೊಟ್ಟವರು ಸೋಮಣ್ಣ. ಅವರಿಂದ ಸಹಾಯ ಪಡೆದುಕೊಂಡಿರುವವರು ಬಹಳಷ್ಟು ಮಂದಿ ಇದ್ದಾರೆ. ಎಲ್ಲ ಜಾತಿ ಮಠಗಳ ಬಗ್ಗೆ ಅವರಿಗೆ ಅಪಾರ ಅಭಿಮಾನ. ಮಠಮಾನ್ಯಗಳಿಗೆ ಅವರು ನೀಡುವ ಕೊಡುಗೆಯನ್ನು ಇಂದಿಗೂ ಸಹ ಬಹಳಷ್ಟು ಮಠಾಧೀಶರು ಸ್ಮರಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.