
ಚಾಮರಾಜನಗರ: ‘ವೈದ್ಯಕೀಯ ಕ್ಷೇತ್ರದಲ್ಲಿ ಈಗ ವೈದ್ಯರಿಗಿಂತ ಶುಶ್ರೂಷಕರಿಗೆ ಹೆಚ್ಚು ಬೇಡಿಕೆ ಇದೆ, ಉತ್ತಮ ಉದ್ಯೋಗಾವಕಾಶ ಇದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಗುರುವಾರ ಹೇಳಿದರು.
ನಗರದ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಜೆ.ಎಸ್.ಎಸ್.ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆ.ಎಸ್.ಎಸ್. ಸ್ಕೂಲ್ ಆಫ್ ನರ್ಸಿಂಗ್ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನರ್ಸಿಗ್ ಎಂದರೆ ಅದು ಸೇವೆ. ಸರ್ಸ್ಗಳು ಒಂದು ಜೀವದ ಜೊತೆ ಇರುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ರೋಗಿಗಳಿಗೆ ಆದಷ್ಟು ಧೈರ್ಯ ತುಂಬಿ ಅವರ ಆರೈಕೆ ಮಾಡುವಲ್ಲಿ ನರ್ಸ್ಗಳ ಪಾತ್ರ ದೊಡ್ಡದು’ ಎಂದು ಹೇಳಿದರು.
‘ನರ್ಸಿಂಗ್ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಣದ ಅವಧಿಯಲ್ಲಿ ನೀವು ಎಷ್ಟು ಜ್ಞಾನ ಪಡೆಯುತ್ತೀರಿ ಅನ್ನುವುದು ಮುಖ್ಯ. ನರ್ಸಿಂಗ್ ವಿಷಯದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ನೀವು ಒಳ್ಳೆಯ ಅಂಕ ಪಡೆದುಕೊಳ್ಳುವುದರ ಜೊತೆಗೆ ಅದನ್ನು ಸೇವೆಗೆ ಬಳಸಿಕೊಳ್ಳಬೇಕು’ ಎಂದು ಚಿದಂಬರ ಹೇಳಿದರು.
ಜೆ.ಎಸ್.ಎಸ್.ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ನರ್ಸಿಂಗ್ ವೃತ್ತಿ ಪವಿತ್ರವಾದ ವೃತ್ತಿ ಮತ್ತು ಕೋವಿಡ್ ಸಂದರ್ಭದಲ್ಲಿ ನರ್ಸಿಂಗ್ ವೃತ್ತಿ ಮಹತ್ವದ ಪಾತ್ರ ನಿರ್ವಹಿಸಿತು. ನಿಮಗೆ ಸಾಕಷ್ಟು ಅವಕಾಶಗಳು ಇದ್ದು ಎಲ್ಲಿ ಬೇಕಾದರೂ ಮತ್ತು ಆರೋಗ್ಯ ವಿಚಾರದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ’ ಎಂದರು.
ಜೆಎಸ್ಎಸ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲ ಜಿ.ವಿನಯಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.