ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರ್‌, ಭುವನೇಶ್ವರಿಯ 108 ಅಡಿ ಪ್ರತಿಮೆ ನಿರ್ಮಾಣ: ಮಾಯಣ್ಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 11:34 IST
Last Updated 12 ಏಪ್ರಿಲ್ 2021, 11:34 IST
ಮಾಯಣ್ಣ
ಮಾಯಣ್ಣ   

ಚಾಮರಾಜನಗರ: ‘ಕನ್ನಡಮ್ಮನ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕನ್ನಡಿಗರ ಪ್ರತೀಕವಾಗಿ ರಾಜ್ಯದ ಮಧ್ಯ ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯತ್‌ ಹಾಗೂ ತಾಯಿ ಭುವನೇಶ್ವರಿ ಪ್ರತಿಮೆಯನ್ನು ನಿರ್ಮಾಣ ಮಾಡುವುದು ನಮ್ಮ ಗುರಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಯಣ್ಣ ಅವರು ಸೋಮವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಬಿಬಿಎಂಪಿಯ ಪ್ರತಿ ವಾರ್ಡ್ ಮಟ್ಟದಲ್ಲಿ ಪರಿಷತ್ತನ್ನು ಬೆಳೆಸುವುದು, ಕರ್ನಾಟಕ ವಂಶವೃಕ್ಷ ನಿರ್ಮಿಸುವುದು, ಇಲ್ಲಿಯವರೆಗೆ ಕನ್ನಡ ಸೇವೆ ಸಲ್ಲಿಸಿರುವ ಮಹನೀಯರ ಸ್ಮರಿಸುವ ಕೆಲಸ ಮಾಡುವುದು ನನ್ನ ಉದ್ದೇಶ’ ಎಂದರು.

‘ಹಲ್ಲು ಕಿತ್ತ ಹಾವಿನಂತಿರುವ ಕನ್ನಡ ಸಾಹಿತ್ಯ ಪರಿಷತ್ ಅನ್ನು ಚಾಮರಾಜನಗರದಿಂದ ಬೀದರ್ವರೆಗೂ ಸಾರ್ವಜನಿಕ ಪರಿಷತ್ತನ್ನಾಗಿ ಮಾಡಲು ಶ್ರಮಿಸುತ್ತೇನೆ. ಪರಿಷತ್ತನ್ನು ಕನ್ನಡ ಶಕ್ತಿ ಕೇಂದ್ರವನ್ನಾಗಿ ಮಾಡಲು ನನ್ನ ಜೀವನವನ್ನು ಮುಡುಪಾಗಿಟ್ಟಿದ್ದೇನೆ’ ಎಂದು ಹೇಳಿದರು.

ADVERTISEMENT

ರಾಷ್ರ್ಟೀಯ ಕನ್ನಡ ಪೀಠ ಪ್ರಶಸ್ತಿ: ನಾಡು ನುಡಿಗೆ ಅನನ್ಯ ಕಾಣಿಕೆ ನೀಡಿದ ಸಾಧಕರಿಗೆ ಜ್ಞಾನಪೀಠ ಪ್ರಶಸ್ತಿ ಮಾದರಿಯಲ್ಲಿ ₹12,12,122 ಮೊತ್ತದ ನಗದು, ಚಿನ್ನದ ಪದಕವುಳ್ಳ ‘ರಾಷ್ಟ್ರೀಯ ಕನ್ನಡ ಪೀಠ ಪ್ರಶಸ್ತಿ’ ಸ್ಥಾಪನೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಭವನ ನಿರ್ಮಾಣ, ಎಲ್ಲ ಜಿಲ್ಲೆಗಳಲ್ಲಿ ಐವರು ಯುವ ಸಾಹಿತಿಗಳನ್ನು ಗುರುತಿಸಿ, ಅವರಿಗೆ ಹಿರಿಯ ಸಾಹಿತಿಗಳಿಂದ ತರಬೇತಿ ನೀಡುವ ಕೆಲಸ ಮಾಡುತ್ತೇನೆ’ ಎಂದು ಮಾಯಣ್ಣ ಅವರು ಹೇಳಿದರು.

ಕೀರ್ತಿ ಯುವತಿ ಮಹಿಳಾ ಮಂಡಲಿಯ ಅಧ್ಯಕ್ಷೆ ಮಂಜುಳಾ ರಮೇಶ್, ಅನಿಕೇತನ ಕನ್ನಡ ಬಳಗ ಸದಸ್ಯ ಭರತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.