ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಪ್ರವಾಹ ತಗ್ಗಿದೆ. ಇದೀಗ ನದಿ ತೀರದ ಗ್ರಾಮಸ್ಥರ ಆತಂಕ ದೂರವಾಗಿದೆ.
ಸೋಮವಾರ ರಾತ್ರಿ ಹಾಗೂ ಮಂಗಳವಾರ ನೂರಾರು ಎಕರೆ ಜಮೀನು ಪ್ರವಾಹದಿಂದ ಜಲಾವೃತವಾಗಿತ್ತು. ಬುಧವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಕೆ.ಆರ್.ಎಸ್ ಜಲಾಶಯದಿಂದ 1.23 ಲಕ್ಷ ಕ್ಯುಸೆಕ್ ನೀರು ಬಿಟ್ಟಿದ್ದರು. ಇದರಿಂದ ನೂರಾರು ಎಕರೆ ಜಮೀನು ಜಲಾವೃತವಾಗಿತ್ತು. ಈಗ ನದಿಗೆ ಕೇವಲ 30 ಸಾವಿರ ಕ್ಯುಸೆಕ್ ನೀರು ಮಾತ್ರ ಬಿಟ್ಟಿದ್ದಾರೆ.
ಹಾಗಾಗಿ, ನದಿಯಲ್ಲಿ ಸಂಪೂರ್ಣ ನೀರಿನ ಮಟ್ಟ ತಗ್ಗಿದೆ. ಇದರಿಂದ ನದಿ ತೀರದ ಒಂಬತ್ತು ಗ್ರಾಮಗಳ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಹತ್ತಾರು ವರ್ಷಗಳಿಂದಲೂ ಪ್ರವಾಹ ಬಂದು ಗ್ರಾಮಗಳೇ ಮುಳುಗಡೆಯಾಗುತ್ತಿತ್ತು. ಆದರೆ, ಈ ವರ್ಷ ಎರಡು ಬಾರಿ ಪ್ರವಾಹ ಬಂದಿದೆ. ಜಮೀನುಗಳು ಮಾತ್ರ ಮುಳುಗಡೆಯಾಗಿವೆಯೇ ಹೊರತು ಯಾವುದೇ ಮನೆಗಳು ಮುಳುಗಡೆ ಆಗಿಲ್ಲ. ನೀರಿನ ಪ್ರಮಾಣ ಮತ್ತೆ ಹೆಚ್ಚಾದರೆ ತಾಲ್ಲೂಕು ಆಡಳಿತ ನದಿತೀರದ ಗ್ರಾಮಸ್ಥರ ಜೊತೆ ಇರುತ್ತದೆ. ಕೃಷಿ ಅಧಿಕಾರಿಗಳು ಹಾಗೂ ಸರ್ವೆ ಅಧಿಕಾರಿಗಳ ಜೊತೆ ಜಂಟಿ ಸರ್ವೆ ನಡೆಸಿ, ಯಾರಿಗಾದರೂ ಬೆಳೆ ನಷ್ಟ ಉಂಟಾದರೆ ಅವರಿಗೆ ಪರಿಹಾರ ಸಹ ನೀಡುತ್ತೇವೆ. ಯಾವ ರೈತರು ಸಹ ಆತಂಕಪಡುವ ಅವಶ್ಯಕತೆ ಇಲ್ಲ. ಪ್ರವಾಹ ತಗ್ಗಿದ ನಂತರ ಸರ್ವೆ ಮಾಡಿಸುತ್ತೇವೆ ಎಂದು ತಹಶೀಲ್ದಾರ್ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.